ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಆಕ್ಷನ್ ಮೂಡ್‌ನಲ್ಲಿ ಶಾಸಕ ಸಮರ್ಥ್ ಶಾಮನೂರು: 8 ಗ್ರಾ.ಪಂ ಅಧಿಕಾರಿಗಳೊಂದಿಗೆ ಮಹತ್ವದ ಸಭೆ

Author Picture
Published On: May 15, 2026
samarth-shamanur-davanagere-south-officials-meeting

—Election Update—

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಜನಪ್ರತಿನಿಧಿಯಾಗಿ ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ ನೂತನ ಶಾಸಕ ಸಮರ್ಥ್ ಶಾಮನೂರು ಅವರು, ಮರುದಿನವೇ ಭರ್ಜರಿ ಕಾರ್ಯೋನ್ಮುಖರಾಗಿದ್ದಾರೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಫೀಲ್ಡ್‌ಗಿಳಿದು ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ದುಗ್ಗಮ್ಮನ ಬಾವಿ ಅಭಿವೃದ್ಧಿಯಿಂದ ದಿನದ ಆರಂಭ: ದಿನದ ಆರಂಭವನ್ನು ದುಗ್ಗಮ್ಮನ ಬಾವಿಗೆ ಭೇಟಿ ನೀಡುವ ಮೂಲಕ ಶುರು ಮಾಡಿದ ಅವರು, ಬಾವಿಯ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಮುಂದಾಗಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಲ್ಲಿ ಮೆಟ್ಟಿಲುಗಳ ನಿರ್ಮಾಣಕ್ಕೆ ಬೇಡಿಕೆ ಇದ್ದು, ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

8 ಗ್ರಾಮ ಪಂಚಾಯಿತಿಗಳ ಅಧಿಕಾರಿಗಳೊಂದಿಗೆ ಮಹತ್ವದ ಸಭೆ: ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ತಾಲೂಕು ಪಂಚಾಯಿತಿ ಮಟ್ಟದ ಸುಮಾರು 100-150ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು. ಪ್ರಮುಖವಾಗಿ ಕ್ಷೇತ್ರದ ವ್ಯಾಪ್ತಿಗೆ ಬರುವ 8 ಗ್ರಾಮ ಪಂಚಾಯಿತಿಗಳಾದ ಹದಡಿ, ಮುದಾದಡಿ, ಕೈದಾಳು, ಕುಕ್ಕವಾಡ, ಕುರ್ಕಿ, ಬೆಳವನೂರು, ಶಿರಮಗೊಂಡನಹಳ್ಳಿ ಹಾಗೂ ಕಂಗೊಂಡನಹಳ್ಳಿಗಳ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಪಿಡಬ್ಲ್ಯೂಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. “ಒಂದು ಇಲಾಖೆಗೂ ಮತ್ತೊಂದು ಇಲಾಖೆಗೂ ಸಮನ್ವಯದ ಕೊರತೆ ಇರಬಾರದು. ಅಂತರ್-ಇಲಾಖಾ ಸಂವಹನದ (Inter-departmental communication) ಮೂಲಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು” ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಉದಾಹರಣೆಗೆ, ಕೈದಾಳ್ ಕ್ಯಾಂಪ್‌ನಲ್ಲಿ ಸ್ಮಶಾನದ ಜಾಗಕ್ಕಾಗಿ ಬೇಡಿಕೆ ಇತ್ತು. ಸಭೆಯಲ್ಲಿದ್ದ ತಹಸೀಲ್ದಾರ್ ಹಾಗೂ ಸೆಕ್ರೆಟರಿ ಅವರ ಗಮನಕ್ಕೆ ಇದನ್ನು ತಂದು, ತಕ್ಷಣವೇ ಜಾಗ ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಜನರ ಬಳಿಗೇ ಅಧಿಕಾರಿಗಳು – ವಾರ್ಡ್ ರೌಂಡ್ಸ್: ಬೆಳಗ್ಗೆ ನೀಲಮ್ಮನ ತೋಟದ ಕಡೆಗೂ ಭೇಟಿ ನೀಡಿದ್ದ ಶಾಸಕರು, ಅಲ್ಲಿನ ಹಕ್ಕುಪತ್ರ ಸಮಸ್ಯೆ, ರಸ್ತೆ, ಚರಂಡಿ ಹಾಗೂ ಎಲ್.ಟಿ. ಲೈನ್ ಸಮಸ್ಯೆಗಳ ಪರಿಶೀಲನೆ ನಡೆಸಿದರು. ಪಾಲಿಕೆ ಆಯುಕ್ತರು ಹಾಗೂ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರನ್ನು ಜೊತೆಗೊಯ್ದು ಜೆಸಿಬಿ ಮೂಲಕ ರಾಜಕಾಲುವೆ ಸ್ವಚ್ಛತಾ ಕಾರ್ಯವನ್ನು ಖುದ್ದು ನಿಂತು ಮಾಡಿಸಿದರು.

“ಜನರು ಸಣ್ಣ-ಪುಟ್ಟ ಕೆಲಸಗಳಿಗೂ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ನಾವೇ ಅಧಿಕಾರಿಗಳೊಂದಿಗೆ ವಾರ್ಡ್‌ಗಳಿಗೆ ಭೇಟಿ ನೀಡುವ ರೂಢಿ ಮಾಡಿಕೊಳ್ಳುತ್ತೇವೆ. ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ವಾರ್ಡ್‌ಗಳಿಗೆ ಹೋದಾಗ ಸಮಸ್ಯೆಗಳ ನೈಜ ಚಿತ್ರಣ ಸಿಗುತ್ತದೆ,” ಎಂದು ಅವರು ಭರವಸೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಟಾಸ್ಕ್ ಫೋರ್ಸ್ ಮೂಲಕ ಐದು ಬೋರ್‌ವೆಲ್‌ಗಳನ್ನು ಕೊರೆಸಲು ಈಗಾಗಲೇ ಅನುಮೋದನೆ ನೀಡಲಾಗಿದೆ. ಜೊತೆಗೆ ಜಲ ಜೀವನ್ ಮಿಷನ್ (JJM) ಕಾಮಗಾರಿಗಳ ವಾಸ್ತವ ಸ್ಥಿತಿ ಹಾಗೂ ಪೈಪ್‌ಲೈನ್ ಅಳವಡಿಕೆ ಬಗ್ಗೆಯೂ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಪಡೆದುಕೊಂಡರು. ಬೋರ್‌ವೆಲ್ ಬೇಕೇ ಅಥವಾ ವಾಟರ್ ಟ್ಯಾಂಕ್ ಬೇಕೇ ಎಂಬ ಬಗ್ಗೆ ಗ್ರಾಮವಾರು ನಿಖರ ಮಾಹಿತಿ ಕಲೆಹಾಕಿ ಶಾಶ್ವತ ಪರಿಹಾರ ಒದಗಿಸುವುದು ನಮ್ಮ ಕರ್ತವ್ಯ ಎಂದು ಅವರು ಸ್ಪಷ್ಟಪಡಿಸಿದರು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Home
Web Stories
Instagram
WhatsApp