ಚಿತ್ರದುರ್ಗ: ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಸೋಮವಾರ “ಸುರಕ್ಷಿತ ಉತ್ಪನ್ನಗಳು, ಆತ್ಮವಿಶ್ವಾಸದ ಗ್ರಾಹಕರು” ಎಂಬ ಘೋಷವಾಕ್ಯದೊಂದಿಗೆ “ವಿಶ್ವ ಗ್ರಾಹಕರ ದಿನಾಚರಣೆ” ಏರ್ಪಡಿಸಲಾಗಿತ್ತು.
ಗ್ರಾಹಕ ಜಾಗೃತಿ ಅಗತ್ಯ
ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್ ಮಾತನಾಡಿ, ಹತ್ತು ವರ್ಷಗಳ ಹಿಂದೆ ಜನರು ನೇರವಾಗಿ ಅಂಗಡಿಗಳಿಗೆ ಭೇಟಿ ನೀಡಿ, ವಸ್ತುವಿನ ಗುಣಮಟ್ಟ ಪರಿಶೀಲಿಸಿ ಖರೀದಿ ಮಾಡುತ್ತಿದ್ದರು. ಆದರೆ ಇಂದು ಆನ್ಲೈನ್ ಶಾಪಿಂಗ್ ವ್ಯಾಪಕವಾಗಿದ್ದು, ಅದರೊಂದಿಗೆ ಗ್ರಾಹಕರು ವಂಚನೆಗೊಳಗಾಗುವ ಸಾಧ್ಯತೆಗಳೂ ಹೆಚ್ಚಿವೆ. ಹೀಗಾಗಿ ಪ್ರತಿಯೊಬ್ಬ ಗ್ರಾಹಕನೂ ಜಾಗೃತನಾಗಿರುವುದು ಇಂದಿನ ಅಗತ್ಯ ಎಂದರು.
ನಕಲಿ ಬ್ರ್ಯಾಂಡ್ಗಳ ಬಗ್ಗೆ ಇರಲಿ ಎಚ್ಚರಿಕೆ
ಆನ್ಲೈನ್ ವೇದಿಕೆಗಳಲ್ಲಿ ವಂಚನೆಗೊಳಗಾದ ಸಂದರ್ಭದಲ್ಲಿ ಗ್ರಾಹಕರು ಎದೆಗುಂದದೆ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬೇಕು. ಪ್ರಸ್ತುತ ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ, ಆನ್ಲೈನ್ ಮೂಲಕವೂ ದೂರನ್ನು ದಾಖಲಿಸುವ ಸೌಲಭ್ಯಗಳು ಲಭ್ಯವಿವೆ. ಯಾವುದೇ ಉತ್ಪನ್ನ ಕೊಳ್ಳುವ ಮೊದಲು ಅದರ ಗುಣಮಟ್ಟ, ಸೇವೆ ಹಾಗೂ ಬಾಳಿಕೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಲಭ್ಯವಿರುವ ನಕಲಿ ಬ್ರ್ಯಾಂಡ್ಗಳ ಬಗ್ಗೆ ಎಚ್ಚರದಿಂದಿರಬೇಕು. ಗ್ರಾಹಕರು ಕಾನೂನಿನ ಅರಿವು ಹೊಂದಿದ್ದರೆ ಮಾತ್ರ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಇಂತಹ ಮಾಹಿತಿಗಳನ್ನು ಪಡೆದು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಗ್ರಾಹಕ ಹಕ್ಕು ಅರಿವು ಅಗತ್ಯ
ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗ್ರಾಹಕರು ಕೇವಲ ವಸ್ತುಗಳನ್ನು ಖರೀದಿಸುವವರಾಗದೆ, ತಮ್ಮ ಹಕ್ಕುಗಳ ಬಗ್ಗೆ ಸಂಪೂರ್ಣ ಅರಿವುಳ್ಳವರಾಗಿರಬೇಕು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಎಸ್.ಮಹೇಶ್ವರಪ್ಪ ತಿಳಿಸಿದರು.
ಒಂದು ಕಂಪನಿಯ ಉತ್ಪನ್ನ ಮಾರುಕಟ್ಟೆಗೆ ಬಂದರೆ ಅದಕ್ಕೆ ಪೈಪೋಟಿ ನೀಡಲು ಹತ್ತಾರು ಕಂಪನಿಗಳು ಕಳಪೆ ಗುಣಮಟ್ಟದ ವಸ್ತುಗಳನ್ನು ಬಿಡುಗಡೆ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಗ್ರಾಹಕರು ಗುಣಮಟ್ಟ ಮತ್ತು ಪರಿಮಾಣದ ಬಗ್ಗೆ ಎಚ್ಚರವಹಿಸುವುದು ಅತ್ಯಗತ್ಯ. ಚಿನ್ನ, ಬೆಳ್ಳಿ, ಬಟ್ಟೆ, ವಾಹನ ಹೀಗೆ ಯಾವುದೇ ಖರೀದಿ ಮಾಡಿದರೂ ಮಾರಾಟಗಾರನ ಹೆಸರಿರುವ ಅಸಲಿ ಬಿಲ್ ಪಡೆಯುವುದು ಗ್ರಾಹಕರ ಹಕ್ಕು ಮತ್ತು ಕರ್ತವ್ಯವಾಗಿದೆ. ಒಂದು ವೇಳೆ ವಂಚನೆಗೆ ಒಳಗಾದಲ್ಲಿ ಅಥವಾ ವಸ್ತುವು ಗ್ಯಾರಂಟಿ ಅವಧಿಯೊಳಗೆ ಕೆಟ್ಟುಹೋದಲ್ಲಿ ಕಾನೂನು ಹೋರಾಟ ಮಾಡಲು ಈ ಬಿಲ್ ಪ್ರಮುಖ ದಾಖಲೆಯಾಗುತ್ತದೆ ಎಂದು ಹೇಳಿದರು.
ಅಧಿಕೃತ ರಶೀದಿ ಪಡೆಯಿರಿ
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಬಿ.ಹೆಚ್.ಯಶೋಧ ಮಾತನಾಡಿ, ಮಗು ತಾಯಿಯ ಗರ್ಭದಲ್ಲಿ ಇದ್ದಾಗಿನಿಂದಲೇ ಯಾವುದಾದರೂ ಒಂದು ರೂಪದಲ್ಲಿ ಗ್ರಾಹಕನಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಬೆಳೆಸಿಕೊಳ್ಳಬೇಕು. ಯಾವುದೇ ವಸ್ತು ಅಥವಾ ಸೇವೆಯನ್ನು ಹಣ ನೀಡಿ ಪಡೆದಾಗ ಅದಕ್ಕೆ ಸಂಬಂಧಿಸಿದ ಅಧಿಕೃತ ರಶೀದಿಯನ್ನು ಪಡೆಯುವುದು ಅತ್ಯಗತ್ಯ. ರಶೀದಿ ಇಲ್ಲದಿದ್ದರೆ ಗ್ರಾಹಕರು ನ್ಯಾಯಾಲಯದಲ್ಲಿ ಪರಿಹಾರ ಪಡೆಯಲು ಅರ್ಹರಾಗುವುದಿಲ್ಲ ಎಂದು ತಿಳಿಸಿದರು.
ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೆ. ಕರಿಯಪ್ಪ ಮಾಳಿಗೆ ಮಾತನಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನಾಶಾಸ್ತ್ರ ಇಲಾಖೆ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಅಡುಗೆ ಅನಿಲ ವಿತರಕರು, ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಕಾನೂನು ಮಾಪನಾ ಶಾಸ್ತ್ರ ಸಹಾಯಕ ನಿಯಂತ್ರಕ ಚನ್ನಬಸಪ್ಪ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಯು.ಬಿ.ಗೀತಾ ಇದ್ದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
📩 ಸುದ್ದಿ ಕಳುಹಿಸಿ
madhayakarnatakalive@gmail.com