ಚಿತ್ರದುರ್ಗ: ಹಿರಿಯೂರು ತಾಲೂಕಿನ ಬಬ್ಬೂರುಫಾರಂನಲ್ಲಿ ರಾಜ್ಯ ವಲಯ ಯೋಜನೆಯಡಿ ಲಾಭದಾಯಕ ಸುಸ್ಥಿರ ಸಮಗ್ರ ಕೃಷಿ ಪದ್ದತಿ ಕುರಿತು ರೈತರಿಗೆ ಮೂರು ದಿನಗಳ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ನಿರಂತರ ಸುಸ್ಥಿರ ಇಳುವರಿಗೆ ಸಮಗ್ರ ಕೃಷಿ ಪದ್ದತಿ ಸೂಕ್ತ
ಈ ವೇಳೆ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಮಾತನಾಡಿ, ರೈತರು ನಿರಂತರವಾಗಿ ಸುಸ್ಥಿರ ಇಳುವರಿ ಪಡೆಯಲು ಸಮಗ್ರ ಕೃಷಿ ಪದ್ದತಿ ಅಳವಡಿಕೆಯಿಂದ ಸಾಧ್ಯವಿದೆ. ರೈತರು ಏಕಬೆಳೆ ಪದ್ದತಿ ಅಳವಡಿಸದೆ ಸ್ಥಳೀಯ ಮಣ್ಣು ಮತ್ತು ಹವಾಮಾನದನುಸಾರವಾಗಿ ಬಹು ಬೆಳೆ, ಅಂತರ ಬೆಳೆ ಮತ್ತು ಮಿಶ್ರ ಬೆಳೆ ಪದ್ದತಿಯಲ್ಲಿ ಉತ್ತಮ ಇಳುವರಿ ಪಡೆಯಬಹುವುದು ಎಂದರು.
ರೈತರು ಲಾಭದಾಯಕ ಸುಸ್ಥಿರ ಸಮಗ್ರ ಕೃಷಿ ಪದ್ದತಿಯಲ್ಲಿ ಹೈನುಗಾರಿಕೆಯಿಂದ ಪ್ರತಿ ದಿನ ಆದಾಯ, ಸೊಪ್ಪುಗಳನ್ನು ಬೆಳೆಯುವುದರಿಂದ ತಿಂಗಳಿಗೊಮ್ಮೆ ಆದಾಯ, ಹೆಸರು, ಉದ್ದು, ಅಲಸಂದಿ, ಸೌತೆಕಾಯಿ, ಕಲ್ಲಂಗಡಿ, ಟಮೊಟೊ ಮತ್ತು ಇತರೆ ತರಕಾರಿಗಳಿಂದ, ರೇಷ್ಮೆ ಮತ್ತು ಕೋಳಿ ಸಾಕಾಣಿಕೆಯಿಂದ 3 ತಿಂಗಳಿಗೊಮ್ಮೆ ಆದಾಯ, ಕುರಿ ಮೇಕೆ ಸಾಕಣಿಯಿಂದ 6 ತಿಂಗಳಿಗೊಮ್ಮೆ ಆದಾಯ, ಪಪ್ಪಾಯ, ಬಾಳೆ ಬೆಳೆಯಿಂದ 9 ತಿಂಗಳಿಗೊಮ್ಮೆ ಆದಾಯ, ಅಡಿಕೆ, ತೆಂಗು, ಮಾವುಗಳಿಂದ ವರ್ಷಕ್ಕೊಮ್ಮೆ ಆದಾಯ, ಸಾಗವಾನಿ, ಶ್ರೀಗಂಧ, ಹೆಬ್ಬೇವು, ಸಿಲ್ವರ್ ಓಕ್ ಮತ್ತು ಇತರೆ ಮರಗಳಿಂದ 15 ರಿಂದ 20 ವರ್ಷಕ್ಕೊಮ್ಮೆ ಆದಾಯವನ್ನು ಪಡೆಯಬಹುದಾಗಿದೆಂದರು.
ಆನ್ಲೈನ್ ತರಬೇತಿ
ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ರೈತರಿಗೆ ಪತ್ರಿಕೆ ಮಾಧ್ಯಮ, ವ್ಯಾಟ್ಸಆಪ್ ಮತ್ತು ಫೇಸ್ಬುಕ್ ಮೂಲಕ ವ್ಯಾಪಕ ಪ್ರಚಾರ ನೀಡಿ ತರಬೇತಿಗೆ ಹಾಜರಾಗಲು ಆಸಕ್ತಿ ಇರುವ ರೈತರನ್ನು ನೋಂದಾಯಿಸಿಕೊಂಡು ಹಂಗಾಮು ಆಧಾರಿತ ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳ ಕುರಿತು ಸಾಂಸ್ಥಿಕ, ಗ್ರಾಮ ಮಟ್ಟದ ತರಬೇತಿ ಮತ್ತು ಗೂಗಲ್ ಮೀಟ್ ಮೂಲಕ ಆನ್ಲೈನ್ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ತರಬೇತಿಗಳ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು.
ಬ್ಯಾಡರಹಳ್ಳಿ ಗ್ರಾಮದ ಇಂಧೂದರ ರವರು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಮಣ್ಣಿನ ತೇವಾಂಶ, ಫಲವತ್ತತೆ ಮತ್ತು ಸೂಕ್ಷ್ಮ ಜೀವಾಣುಗಳ ವೃದ್ದಿ ಹಾಗೂ ಸುಸ್ಥಿರ ಇಳುವರಿಗೆ ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ದತಿಗಳನ್ನು ಅಳವಡಿಕೊಳ್ಳಲು ರೈತರಿಗೆ ತಮ್ಮ ಅನುಭವ ತಿಳಿಸಿದರು.
ಗುಳಗೊಂಡನಹಳ್ಳಿ ನಾಗರಾಜಪ್ಪ ಕಳೆದ 10-12 ವರ್ಷಗಳಿಂದ ಕೃಷಿ ತ್ಯಾಜ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಎರೆಹುಳು ಸಾಕಾಣಿಕೆಯಿಂದ ಸಾವಯವ ಪದ್ದತಿಯಲ್ಲಿ ಕೃಷಿಯನ್ನು ಮಾಡುತ್ತಿದ್ದು, ಎರೆಹುಳು ಸಾಕಾಣಿಕೆಯೊಂದರಲ್ಲೇ ವರ್ಷಕ್ಕೆ 6-7 ಲಕ್ಷ ಆದಾಯಗೊಳಿಸುತ್ತಿರುವ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು. ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೆಂದ್ರದ ಹನುಮಂತನಾಯ್ಕ ರವರು ರೈತರಿಗೆ ಜೇನು ಕೃಷಿ ಪ್ರಾಮುಖ್ಯತೆ ಮತ್ತು ಉಪ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು.
ತರಬೇತಿಯ ಎರಡನೇ ದಿನ ಹಿರಿಯೂರು ಪಶು ವೈದ್ಯಾಧಿಕಾರಿ ಡಾ.ನಾಗರಾಜ್ ಅವರು ರೈತರಿಗೆ ವೈಜ್ಞಾನಿಕ ಹೈನುಗಾರಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ಆಸಕ್ತ ರೈತಬಾಂಧವರು ಭಾಗವಹಿಸಿದ್ದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
📩 ಸುದ್ದಿ ಕಳುಹಿಸಿ
madhayakarnatakalive@gmail.com