ದಾವಣಗೆರೆ: ರಸ್ತೆಯಲ್ಲಿ ಹೋಗುವಾಗ ಆಕಸ್ಮಿಕವಾಗಿ ಬಿದ್ದುಹೋಗಿದ್ದ ಭಾರಿ ಮೌಲ್ಯದ ಚಿನ್ನದ ಆಭರಣಗಳಿದ್ದ ಪರ್ಸ್ ಒಂದನ್ನು ಅತ್ಯಂತ ಚುರುಕಾಗಿ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚುವಲ್ಲಿ ದಾವಣಗೆರೆಯ ಬಸವನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದುಹೋಗಿದ್ದ ಸುಮಾರು 50 ಗ್ರಾಂ ತೂಕದ ಬಂಗಾರದ ಒಡವೆಗಳಿದ್ದ ಪರ್ಸ್ ಅನ್ನು ಸುರಕ್ಷಿತವಾಗಿ ಅದರ ಅಸಲಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಖಾಕಿ ಪಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ನಡೆದಿದ್ದೇನು?
ಮೂಲಗಳ ಮಾಹಿತಿ ಪ್ರಕಾರ, ದಾವಣಗೆರೆ ನಿವಾಸಿಯೊಬ್ಬರು ಜಾಲಿನಗರದಿಂದ ಹೊಂಡದ ಸರ್ಕಲ್ ಮುಖಾಂತರ ಬಾರ್ ಲೈನ್ ರಸ್ತೆಯಾಗಿ ರೈಲ್ವೇ ನಿಲ್ದಾಣದ ಕಡೆಗೆ ತಮ್ಮ ಬೈಕ್ನಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅವರ ಬಳಿಯಿದ್ದ ಚಿನ್ನದ ಆಭರಣಗಳಿದ್ದ ಪರ್ಸ್ ಆಕಸ್ಮಿಕವಾಗಿ ರಸ್ತೆಯಲ್ಲಿ ಬಿದ್ದಿದೆ. ಪರ್ಸ್ ಕಳೆದುಕೊಂಡಿರುವುದು ತಿಳಿಯುತ್ತಿದ್ದಂತೆಯೇ ಆತಂಕಗೊಂಡ ವಾರಸುದಾರರು ತಕ್ಷಣವೇ ಬಸವನಗರ ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದರು.

ಸಿಸಿ ಕ್ಯಾಮೆರಾ ಜಾಲಾಡಿದ ಪೊಲೀಸರು:
ದೂರು ದಾಖಲಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಬಸವನಗರ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಶ್ರೀ ಫಕ್ರುದ್ದೀನ್ ಅಲಿ ಹಾಗೂ ಶ್ರೀ ಸುರೇಶ್ ಟಿ ಅವರು ಕಾರ್ಯಾಚರಣೆಗೆ ಇಳಿದರು. ಸಾರ್ವಜನಿಕರು ಚಲಿಸಿದ ದಾರಿಯಲ್ಲಿದ್ದ ವಿವಿಧ ಸಿಸಿಟಿವಿ (CC TV) ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಈ ವೇಳೆ ಪರ್ಸ್ ಶಿವಾಜಿ ಸರ್ಕಲ್ನ ಮೂಲೆಯೊಂದರಲ್ಲಿ ಬಿದ್ದಿರುವುದು ಖಚಿತವಾಯಿತು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಪ್ರಾಮಾಣಿಕತೆ ಮೆರೆದ ಅಂಗಡಿ ಮಾಲೀಕ: ಸಿಸಿಟಿವಿ ಸುಳಿವು ಆಧರಿಸಿ ಪೊಲೀಸರು ಶಿವಾಜಿ ಸರ್ಕಲ್ ಸಮೀಪದ ಅಂಗಡಿಯವರನ್ನು ವಿಚಾರಣೆ ನಡೆಸಿದಾಗ, ಅಲ್ಲಿನ ಬೀಡಾ ಅಂಗಡಿಯ ಮಾಲೀಕರೊಬ್ಬರು ಆ ಪರ್ಸ್ ಅನ್ನು ಜಾಗರೂಕತೆಯಿಂದ ಎತ್ತಿಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ವಾರಸುದಾರರು ಯಾರಾದರೂ ಹುಡುಕಿಕೊಂಡು ಬಂದರೆ ನೀಡಲೆಂದೇ ಅವರು ಅದನ್ನು ಎತ್ತಿಟ್ಟಿದ್ದರು. ಪೊಲೀಸರು ಆ ಪರ್ಸ್ ಅನ್ನು ಪಡೆದುಕೊಂಡು ಠಾಣೆಗೆ ತಂದಿದ್ದಾರೆ.
ವಾರಸುದಾರರ ಮೊಗದಲ್ಲಿ ಮೂಡಿದ ನಗು:
ಬಳಿಕ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ (PSI) ಶ್ರೀ ನಂಜುಂಡಸ್ವಾಮಿ ಅವರ ಸಮ್ಮುಖದಲ್ಲಿ, ಸುಮಾರು 50 ಗ್ರಾಂ ತೂಕದ ಬಂಗಾರದ ಆಭರಣಗಳಿದ್ದ ಪರ್ಸ್ ಅನ್ನು ಅದರ ಅಸಲಿ ವಾರಸುದಾರರನ್ನು ಠಾಣೆಗೆ ಕರೆಸಿ ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಕಳೆದುಹೋದ ಬಂಗಾರ ಮತ್ತೆ ಕೈಸೇರುತ್ತಿದ್ದಂತೆಯೇ ವಾರಸುದಾರರು ನಿಟ್ಟುಸಿರು ಬಿಟ್ಟಿದ್ದಲ್ಲದೆ, ದಾವಣಗೆರೆ ಜಿಲ್ಲಾ ಪೊಲೀಸ್ ಹಾಗೂ ಬಸವನಗರ ಠಾಣೆಯ ಸಿಬ್ಬಂದಿಯ ದಕ್ಷತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪೊಲೀಸರ ಈ ಶೀಘ್ರ ಕಾರ್ಯಾಚರಣೆ ಮತ್ತು ಬೀಡಾ ಅಂಗಡಿ ಮಾಲೀಕನ ಪ್ರಾಮಾಣಿಕತೆಗೆ ಈಗ ದಾವಣಗೆರೆ ಜನತೆಯಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
