ದಾವಣಗೆರೆ ದಕ್ಷಿಣ ಉಪಚುನಾವಣೆ: ಶಾಮನೂರು ಭದ್ರಕೋಟೆಗೆ ಎಸ್ಡಿಪಿಐ ಲಗ್ಗೆ? ಕೈ-ಪಡೆಗೆ ಮುಸ್ಲಿಂ ಮತದಾರರ ‘ಸ್ವಾಭಿಮಾನ’ದ ನಡುಕ!

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಪ್ರಚಾರ

—Election Update—

ದಾವಣಗೆರೆ: ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಎಂದೂ ಕಾಣದ ರೋಚಕ ತಿರುವು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಂಡುಬರುತ್ತಿದೆ. ದಶಕಗಳಿಂದ ಶಾಮನೂರು ಕುಟುಂಬದ ಅಧಿಪತ್ಯಕ್ಕೆ ಸಾಕ್ಷಿಯಾಗಿದ್ದ ಈ ‘ಬೆಣ್ಣೆ ನಗರಿ’ಯ ಭದ್ರಕೋಟೆ ಈಗ ಅಲುಗಾಡತೊಡಗಿದೆ. ಏಪ್ರಿಲ್ 17ರಂದು ನಡೆಯಲಿರುವ ಮತದಾನಕ್ಕೆ ಇಡೀ ಕ್ಷೇತ್ರ ಸಜ್ಜಾಗಿದ್ದು, ಈ ಬಾರಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಎಸ್‌ಡಿಪಿಐ (SDPI) ದೊಡ್ಡ ಮಟ್ಟದ ಕನ್ನ ಕೊರೆಯುವ ಮುನ್ಸೂಚನೆ ನೀಡಿದೆ.

ಮುಸ್ಲಿಂ ಮತದಾರರ ಬಹಿರಂಗ ಆಕ್ರೋಶ:

ಕ್ಷೇತ್ರದ ಸುಮಾರು 80 ಸಾವಿರಕ್ಕೂ ಅಧಿಕ ಮುಸ್ಲಿಂ ಮತದಾರರು ಈ ಬಾರಿ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿರುವುದು ಈ ಚುನಾವಣೆಯ ಅತಿ ದೊಡ್ಡ ವಿಶೇಷ. ಸಮುದಾಯದ ನಾಯಕರಿಗೆ ಟಿಕೆಟ್ ನೀಡದೆ, ಮತ್ತೆ ಶಾಮನೂರು ಕುಟುಂಬದ ಕುಡಿ ಸಮರ್ಥ್ ಅವರಿಗೆ ಮಣೆ ಹಾಕಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ. “ನಮ್ಮನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ” ಎಂಬ ಆಕ್ರೋಶದ ಕೂಗು ಮನೆ ಮನೆಯಲ್ಲೂ ಕೇಳಿಬರುತ್ತಿದೆ.

ಎಸ್‌ಡಿಪಿಐ ಅಬ್ಬರ – ಅಪ್ಸರ್ ಕೊಡ್ಲಿಪೇಟೆ ಸವಾಲು:

ಕಾಂಗ್ರೆಸ್‌ನ ಈ ಅತೃಪ್ತಿಯ ಲಾಭವನ್ನು ಎಸ್‌ಡಿಪಿಐ ಪಕ್ಷವು ಬಹಳ ಚಾಣಾಕ್ಷತನದಿಂದ ಬಳಸಿಕೊಳ್ಳುತ್ತಿದೆ. ಎಸ್‌ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ಅವರ ಪರವಾಗಿ ಕ್ಷೇತ್ರದಲ್ಲಿ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಯುವ ಸಮುದಾಯವು ಬದಲಾವಣೆಯ ಮಂತ್ರ ಜಪಿಸುತ್ತಾ ಎಸ್‌ಡಿಪಿಐ ಬಾವುಟದಡಿ ಜಮಾಯಿಸುತ್ತಿರುವುದು ಹಸ್ತದ ಪಾಳೆಯದ ನಿದ್ದೆಗೆಡಿಸಿದೆ.

ರಿಜ್ವಾನ್ ಅರ್ಷದ್ ಹೇಳಿಕೆ ನೀಡಿರುವ ತಿರುವು:

ಇದೇ ಹೊತ್ತಲ್ಲಿ ಅತೃಪ್ತಿ ಶಮನ ಮಾಡಲು ಬಂದಿದ್ದ ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಅವರ ಒಂದು ಹೇಳಿಕೆ ಕ್ಷೇತ್ರದಲ್ಲಿ ಕಿಚ್ಚು ಹಚ್ಚಿದೆ. ಎಸ್‌ಡಿಪಿಐ ಕಾರ್ಯಕರ್ತರನ್ನು ಪರೋಕ್ಷವಾಗಿ ಭಯೋತ್ಪಾದಕರಿಗೆ ಹೋಲಿಸಿದ ರಿಜ್ವಾನ್ ಮಾತುಗಳು ಮುಸ್ಲಿಂ ಮತದಾರರನ್ನು ಮತ್ತಷ್ಟು ಕೆರಳಿಸಿದೆ. ಇದರಿಂದಾಗಿ ತಟಸ್ಥವಾಗಿದ್ದ ಮತಗಳೂ ಕಾಂಗ್ರೆಸ್ ವಿರುದ್ಧ ತಿರುಗುವ ಲಕ್ಷಣಗಳು ದಟ್ಟವಾಗಿವೆ.

ಕೊನೆ ಕ್ಷಣದ ಕಸರತ್ತು – ಜಮೀರ್ ಎಂಟ್ರಿ:

ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಕಾಂಗ್ರೆಸ್ ಈಗ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಕರೆತಂದು ಮಲ್ಲಿಕಾರ್ಜುನ್ ಶಾಮನೂರು ಅವರೊಂದಿಗೆ ಕುಳಿತು ಊಟ ಮಾಡುವ, ಫೋಟೋಗೆ ಫೋಸ್ ಕೊಡುವ ಮೂಲಕ ‘ಡ್ಯಾಮೇಜ್ ಕಂಟ್ರೋಲ್’ಗೆ ಪ್ರಯತ್ನಿಸಿದರ. ಆದರೆ ಈ ಫೋಟೋಶೂಟ್ ರಾಜಕೀಯವು ಜನರ ಮನ ಬದಲಿಸುತ್ತದೆಯೇ ಎಂಬುದು ಈಗಿರುವ ಮಿಲಿಯನ್ ಡಾಲರ್ ಪ್ರಶ್ನೆ.

ಒಟ್ಟಿನಲ್ಲಿ, “ಅಭಿ ನಹೀ ತೋ ಕಭಿ ನಹೀ” (ಈಗಲ್ಲದಿದ್ದರೆ ಇನ್ನೆಂದೂ ಇಲ್ಲ) ಎನ್ನುತ್ತಿರುವ ಮುಸ್ಲಿಂ ಸಮುದಾಯದ ಈ ಸ್ವಾಭಿಮಾನದ ಹೋರಾಟ ಶಾಮನೂರು ಕುಟುಂಬದ ಅಧಿಪತ್ಯಕ್ಕೆ ಅಂತ್ಯ ಹಾಡುತ್ತಾ ಅಥವಾ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪವಾಡ ಮಾಡುತ್ತಾ ಎಂಬ ಕುತೂಹಲಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp