|| ಶ್ರೀ ಬಸವೇಶ್ವರ ದೇವರ ಬೃಹತ್ ರಥೋತ್ಸವ ||
ಹರಿಹರ (ದಾವಣಗೆರೆ): ಮಧ್ಯ ಕರ್ನಾಟಕದ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಿಗುಡಿಯ ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠದಲ್ಲಿ ಸಡಗರ, ಸಂಭ್ರಮ ಮನೆಮಾಡಿದೆ. ಪ್ರತಿ ವರ್ಷದಂತೆ ಈ ವರ್ಷವೂ “ಶ್ರೀ ಬಸವೇಶ್ವರ ದೇವರ ಬೃಹತ್ ರಥೋತ್ಸವ” ಹಾಗೂ ಜಗದ್ಗುರುಗಳ “ಅಡ್ಡಪಲ್ಲಕ್ಕಿ ಮಹೋತ್ಸವ” ಅದ್ದೂರಿಯಾಗಿ ನಡೆಯಲಿದ್ದು, ಫೆಬ್ರವರಿ 22 ರಿಂದ 27ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀಶೈಲ ವೃಷಭಪುರಿ ಸೂರ್ಯ ಸಿಂಹಾಸನಾಧೀಶ್ವರ 1108 ಜಗದ್ಗುರು ಶ್ರೀಶ್ರೀಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಹಾಗೂ ನೇತೃತ್ವದಲ್ಲಿ ಈ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ದಿನಾಂಕವಾರು ಕಾರ್ಯಕ್ರಮಗಳ ವಿವರ:
- ಫೆಬ್ರವರಿ 22 (ಭಾನುವಾರ): ಬೆಳಿಗ್ಗೆ ಗಣಪತಿ ಪೂಜೆ, ಸೂರ್ಯ ದೇವರಿಗೆ ಅರ್ಘ್ಯ ಪೂಜೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ. ಇದೇ ದಿನ ಶ್ರೀ ನಂದಿ ಧ್ವಜಾರೋಹಣ ಹಾಗೂ ರಾತ್ರಿ ಶ್ರೀ ಬಸವೇಶ್ವರ ದೇವರಿಗೆ ಕಂಕಣ ಧಾರಣೆ ನಡೆಯಲಿದೆ.
- ಫೆಬ್ರವರಿ 23 (ಸೋಮವಾರ): ಬೆಳಿಗ್ಗೆ ನಂದಿ ಪಟದೊಂದಿಗೆ ಪೂಜಾ ಮೆರವಣಿಗೆ, ನಂತರ ಶ್ರೀ ನಂದಿ ಉತ್ಸವ ಮೂರ್ತಿಗಳ ಗಜೋತ್ಸವ (ಆನೆ ಮೆರವಣಿಗೆ) ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.
- ಫೆಬ್ರವರಿ 24 (ಮಂಗಳವಾರ): ಶ್ರೀ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ನಂದಿ ಉತ್ಸವ ಮೂರ್ತಿಯ ಪುಷ್ಪೋತ್ಸವ.
- ಫೆಬ್ರವರಿ 25 (ಬುಧವಾರ): ಮುಂಜಾನೆ 5 ಗಂಟೆಯಿಂದಲೇ ಮಹಾರುದ್ರಾಭಿಷೇಕ. ಬೆಳಿಗ್ಗೆ 7 ರಿಂದ ಶಿವದೀಕ್ಷಾ ಸಂಸ್ಕಾರ, ಮಂತ್ರೋಪದೇಶ. ಬೆಳಿಗ್ಗೆ 9:30ಕ್ಕೆ ಶ್ರೀ ಬಸವೇಶ್ವರ ದೇವರಿಗೆ ಬಾಸಿಂಗ ಧಾರಣೆ, ಕಳಸ ಸ್ಥಾಪನೆ ಹಾಗೂ ಕಣ್ಣು ಹಾಕುವ ಶಾಸ್ತ್ರ ಜರುಗಲಿದೆ.
- ಫೆಬ್ರವರಿ 26 (ಗುರುವಾರ) – ಪ್ರಮುಖ ದಿನ:
ರಥೋತ್ಸವದ ಪ್ರಮುಖ ಘಟ್ಟ ಗುರುವಾರ ನಡೆಯಲಿದೆ. ಬೆಳಿಗ್ಗೆ 8:30ಕ್ಕೆ ರುದ್ರ ಗುಗ್ಗಳ ಹಾಗೂ ಸಕಲ ವಾದ್ಯಮೇಳಗಳೊಂದಿಗೆ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಲಿದೆ. ತದನಂತರ ಲಕ್ಷಾಂತರ ಭಕ್ತರ ಹರ್ಷೋದ್ಗಾರಗಳ ನಡುವೆ “ಶ್ರೀ ಬಸವೇಶ್ವರ ದೇವರ ಬೃಹತ್ ರಥೋತ್ಸವ” ವಿಜೃಂಭಣೆಯಿಂದ ಜರುಗಲಿದೆ. ರಥೋತ್ಸವದ ನಂತರ ಫಲಪುಷ್ಪಗಳ ಹರಾಜು, ಜವಳ ಕಾರ್ಯಕ್ರಮ ಹಾಗೂ ರಾತ್ರಿ ಓಕುಳಿ ಮತ್ತು ಕಂಕಣ ವಿಸರ್ಜನೆ ನಡೆಯಲಿದೆ. - ಫೆಬ್ರವರಿ 27 (ಶುಕ್ರವಾರ): ಬೆಳಿಗ್ಗೆ ಶ್ರೀ ಬಸವೇಶ್ವರ ಪಾಲಕಿ ಉತ್ಸವದೊಂದಿಗೆ ಬಕ್ಕಿಟ್ಟಿನ ಸೇವೆ ನೆರವೇರುವ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
|| ಭಕ್ತರಿಗೆ ಮಠದ ಮನವಿ ||
ಜಾತ್ರಾ ಮಹೋತ್ಸವದ ಅಂಗವಾಗಿ ಮಠದಲ್ಲಿ ನಿರಂತರ ಮಹಾರುದ್ರಾಭಿಷೇಕ, ದಾಸೋಹ ಮುಂತಾದ ಸೇವೆಗಳು ನಡೆಯಲಿವೆ. ಈ ಸೇವೆಗಳಿಗೆ ತಮ್ಮ ಕೈಲಾದ ಕಾಣಿಕೆ, ದೇಣಿಗೆ ನೀಡಲಿಚ್ಛಿಸುವ ಭಕ್ತರು, ಮಠದ ಕಚೇರಿಯಲ್ಲಿಯೇ ಅಧಿಕೃತ ರಶೀದಿ ಪಡೆದು ದೇಣಿಗೆ ಸಲ್ಲಿಸಬೇಕು. ಹಾಗೂ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆಯುವಂತೆ ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠದ ಪ್ರಕಟಣೆ ತಿಳಿಸಿದೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
