ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಮಾರನಹಳ್ಳಿ ಕಣಿವೆಯಲ್ಲಿ ನಡೆದಿದ್ದ ಭೀಕರ ದರೋಡೆ ಪ್ರಕರಣವನ್ನು ದಾವಣಗೆರೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಜಮೀನು ಮಾರಾಟದ ₹38 ಲಕ್ಷ ನಗದನ್ನು ದೋಚಿದ್ದ ನಾಲ್ವರು ಖತರ್ನಾಕ್ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹೆಚ್.ಟಿ.ಶೇಖರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೋಮಾರನಹಳ್ಳಿ ಕಣಿವೆಯಲ್ಲಿ ಏನಾಗಿತ್ತು?

ಮೂಲತಃ ಭದ್ರಾವತಿ ತಾಲೂಕಿನವರಾದ ಫಿರ್ಯಾದುದಾರರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿದ್ದ ತಮ್ಮ ಜಮೀನನ್ನು ಮಾರಾಟ ಮಾಡಿದ್ದರು. ಜಮೀನು ಮಾರಿ ಬಂದ ₹38 ಲಕ್ಷ ನಗದು ಹಣವನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ತಮ್ಮ ಸ್ನೇಹಿತನೊಂದಿಗೆ ಓಮಿನಿ ಕಾರಿನಲ್ಲಿ ವಾಪಸ್ ಬರುತ್ತಿದ್ದರು. ಮಾರ್ಚ್ 27ರಂದು ರಾತ್ರಿ 11:30ರ ಸುಮಾರಿಗೆ ಹೊನ್ನಾಳಿ ತಾಲೂಕಿನ ಕೋಮಾರನಹಳ್ಳಿ ಕಣಿವೆಯ ನಿರ್ಜನ ಪ್ರದೇಶದಲ್ಲಿ ಇಟಿಯಾಸ್ ಕಾರಿನಲ್ಲಿ ಬಂದ ಗ್ಯಾಂಗ್, ಓಮಿನಿ ಕಾರಿಗೆ ಅಡ್ಡಗಟ್ಟಿ ಭೀಕರ ಹಲ್ಲೆ ನಡೆಸಿ ಹಣದ ಬ್ಯಾಗ್ಗಳನ್ನು ದೋಚಿ ಪರಾರಿಯಾಗಿತ್ತು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
350 ಸಿಸಿಟಿವಿ ಕ್ಯಾಮೆರಾ ಜಾಲಾಡಿದ ಖಾಕಿ ಪಡೆ!

ದರೋಡೆ ನಡೆದ ಸ್ಥಳ ಸಂಪೂರ್ಣ ನಿರ್ಜನ ಪ್ರದೇಶವಾಗಿದ್ದರಿಂದ ಪೊಲೀಸರಿಗೆ ಯಾವುದೇ ಪ್ರತ್ಯಕ್ಷ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಹೆಚ್.ಟಿ.ಶೇಖರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಹಗಲಿರುಳು ಶ್ರಮಿಸಿದ ತಾಂತ್ರಿಕ ವಿಭಾಗದ ಸಿಬ್ಬಂದಿ ಸುಮಾರು 350 ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಹಾಗೂ ಮೊಬೈಲ್ ನೆಟ್ವರ್ಕ್ ಜಾಲಾಡಿ ಆರೋಪಿಗಳ ಪತ್ತೆ ಹಚ್ಚಿದ್ದಾರೆ. ಈ ಅತ್ಯಾಧುನಿಕ ತನಿಖಾ ವೈಖರಿಯನ್ನು ಮೆಚ್ಚಿ ಇಡೀ ತಂಡಕ್ಕೆ ₹25,000 ನಗದು ಬಹುಮಾನ ಘೋಷಿಸಲಾಗಿದೆ.
ದರೋಡೆಗೆ ಸ್ಕೆಚ್ ಹಾಕಿಕೊಟ್ಟಿದ್ದೇ ಜಮೀನು ಬ್ರೋಕರ್!
ಪೊಲೀಸ್ ತನಿಖೆಯಲ್ಲಿ ದರೋಡೆಯ ಹಿಂದಿನ ಅಸಲಿ ರೋಚಕ ಕಥೆ ಹೊರಬಿದ್ದಿದೆ. ಹಗರಿಬೊಮ್ಮನಹಳ್ಳಿಯ ಜಮೀನು ವ್ಯವಹಾರದಲ್ಲಿ ಮಧ್ಯವರ್ತಿಯಾಗಿದ್ದ ಮೆಹಬೂಬ್ ಎಂಬಾತನೇ ಈ ದರೋಡೆಯ ಮಾಸ್ಟರ್ ಮೈಂಡ್! ಮೆಹಬೂಬ್ ಅದೇ ಊರಿನ ಅಜ್ಜಪ್ಪ ಎಂಬಾತನಿಂದ ದೊಡ್ಡ ಮೊತ್ತದ ಸಾಲ ಪಡೆದಿದ್ದ. ಸಾಲ ತೀರಿಸುವಂತೆ ಅಜ್ಜಪ್ಪ ಪದೇ ಪದೇ ಒತ್ತಡ ಹೇರುತ್ತಿದ್ದ ಹಿನ್ನೆಲೆಯಲ್ಲಿ, ಮೆಹಬೂಬ್ ಜಮೀನು ಮಾರಾಟದ ಭಾರಿ ಹಣದ ಮೂಮೆಂಟ್ ಬಗ್ಗೆ ಅಜ್ಜಪ್ಪನಿಗೆ ಮಾಹಿತಿ ನೀಡಿದ್ದ. ಅಜ್ಜಪ್ಪ ತನ್ನ ಕ್ರಿಮಿನಲ್ ಸಹಚರರಾದ ಹನುಮಂತಪ್ಪ ಮತ್ತು ಅನಿಲನ ಜೊತೆಗೂಡಿ ಕಾರು ಅಡ್ಡಗಟ್ಟಿ ದರೋಡೆ ಮಾಡಲು ಸ್ಕೆಚ್ ಹಾಕಿದ್ದ.
₹15 ಲಕ್ಷಕ್ಕೆ ಪಾರ್ಟಿ, ಮನೆ ಕಟ್ಟಲು ಬಳಕೆ!
ಬಂಧಿತ ಆರೋಪಿಗಳಿಂದ ₹23 ಲಕ್ಷ ನಗದು ಹಣ, ಕೃತ್ಯಕ್ಕೆ ಬಳಸಿದ ಇಟಿಯಾಸ್ ಕಾರು ಹಾಗೂ ಮೊಬೈಲ್ ಫೋನ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ದೋಚಿದ್ದ ₹38 ಲಕ್ಷ ಹಣದಲ್ಲಿ ಈಗಾಗಲೇ ₹15 ಲಕ್ಷದಷ್ಟು ಹಣವನ್ನು ಆರೋಪಿಗಳು ಗೋವಾಕ್ಕೆ ಹೋಗದೇ ಇಲ್ಲೇ ಊರಿನಲ್ಲಿ ಸ್ನೇಹಿತರಿಗೆ ಭರ್ಜರಿ ಪಾರ್ಟಿ ಮಾಡಲು, ಇತರರಿಗೆ ಹಂಚಲು ಹಾಗೂ ಸ್ವಂತ ಮನೆ ಕಟ್ಟಡದ ಕೆಲಸಕ್ಕೆ ಬಳಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತರ ಪೈಕಿ ಹನುಮಂತಪ್ಪನ ವಿರುದ್ಧ ಈ ಹಿಂದೆ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಅಡಿಕೆ ಕಳವು ಹಾಗೂ ಡಕಾಯಿತಿ ಯತ್ನ ಪ್ರಕರಣಗಳಿದ್ದರೆ, ಅನಿಲನ ವಿರುದ್ಧ ವಿಜಯನಗರ ಜಿಲ್ಲೆಯ ಹಲವಾಗಲು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಸದ್ಯ ನಾಲ್ವರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
