ಆನ್‌ಲೈನ್ ಗೇಮ್‌ ಸಾಲ ತೀರಿಸಲು ಒಂಟಿ ವೃದ್ಧೆಯ ಬರ್ಬರ ಹತ್ಯೆ: ಖತರ್ನಾಕ್ ಆರೋಪಿ ಅಂದರ್!

Author Picture
Published On: February 23, 2026
70 ಲಕ್ಷ ಮೌಲ್ಯದ ಸ್ವತ್ತು ವಶ: ದಾವಣಗೆರೆ ಎಸ್‌ಪಿ ಶೇಖರ್ ಹೆಚ್.ಟಿ

—Advertisement—

ನ್ಯಾಮತಿ (ಮಧ್ಯ ಕರ್ನಾಟಕ ಲೈವ್): ಆನ್‌ಲೈನ್ ಗೇಮ್‌ ಆಡಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಯುವಕನೊಬ್ಬ, ಸಾಲಗಾರರ ಕಾಟ ತಾಳಲಾರದೆ ಒಂಟಿ ವೃದ್ಧೆಯೊಬ್ಬರನ್ನು ಬರ್ಬರವಾಗಿ ಕತ್ತುಹಿಸುಕಿ ಕೊಲೆ ಮಾಡಿ, ಚಿನ್ನಾಭರಣ ದೋಚಿದ್ದ ಭೀಕರ ಘಟನೆಯನ್ನು ದಾವಣಗೆರೆ ಜಿಲ್ಲಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಅರುಂಡಿ ಗ್ರಾಮದಲ್ಲಿ ಫೆಬ್ರವರಿ 2, 2026 ರಂದು ನಡೆದಿದ್ದ 64 ವರ್ಷದ ಕಮಲಮ್ಮ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮೂಲದ ಯುವಕನನ್ನು ಬಂಧಿಸಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.

ಪ್ರಕರಣದ ಪ್ರಮುಖ ಅಂಶಗಳು

ಆನ್‌ಲೈನ್ ಗೇಮ್ ಗೀಳು ಮತ್ತು ಕೊಲೆಯ ಸಂಚು

ಪೊಲೀಸ್ ವಿಚಾರಣೆ ವೇಳೆ ಆರೋಪಿ ಅಭಿಷೇಕ್ ಬಾಯ್ಬಿಟ್ಟಿರುವ ಮಾಹಿತಿಯಂತೆ, ಈತ 2022ನೇ ಇಸವಿಯಿಂದ ಆನ್‌ಲೈನ್ ಗೇಮ್‌ಗಳಿಗೆ ಅಡಿಕ್ಟ್ ಆಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದನು. ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಕಳೆದ 5-6 ತಿಂಗಳುಗಳಿಂದ ಊರು ಬಿಟ್ಟು ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದ. ಫೆಬ್ರವರಿ 2 ರಂದು ಶಿವಮೊಗ್ಗದಿಂದ ಹೊನ್ನಾಳಿಗೆ ಬಸ್ಸಿನಲ್ಲಿ ಬಂದು, ಅಲ್ಲಿಂದ ಬೈಕ್‌ಗಳಿಗೆ ಕೈಮಾಡಿ ಲಿಫ್ಟ್ ಪಡೆದು ಅರುಂಡಿ ಗ್ರಾಮದ ಸರ್ಕಲ್‌ಗೆ ಬಂದಿದ್ದನು.

ಗ್ರಾಮದಲ್ಲಿ ದೇವರ ಪಲ್ಲಕ್ಕಿ ಉತ್ಸವ ನಡೆಯುತ್ತಿರುವುದನ್ನು ಗಮನಿಸಿದ ಆರೋಪಿ, ಪಲ್ಲಕ್ಕಿ ಜೊತೆ ಹೋಗುತ್ತಿದ್ದ. ಈ ವೇಳೆ ಪಲ್ಲಕ್ಕಿ ಕಮಲಮ್ಮ ಅವರ ಮನೆಯ ಮುಂದೆ ಹಾದುಹೋಗುವಾಗ, ವೃದ್ಧೆಯ ಮೈಮೇಲಿದ್ದ ಬಂಗಾರದ ಒಡವೆಗಳನ್ನು ನೋಡಿ ಹೊಂಚು ಹಾಕಿದ್ದನು.

ಹಿಂದಿನ ಬಾಗಿಲಿನಿಂದ ನುಗ್ಗಿ ಕೃತ್ಯ

ಒಡವೆ ದೋಚಲು ನಿರ್ಧರಿಸಿದ ಆರೋಪಿ, ರಾತ್ರಿ ಕಮಲಮ್ಮ ಅವರ ಮನೆಯ ಹಿಂದಿನ ಬಾಗಿಲಿನಿಂದ ಒಳನುಗ್ಗಿ ಅಡಗಿ ಕುಳಿತಿದ್ದನು. ವೃದ್ಧೆ ಮಲಗಿದ ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಮೈಮೇಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದನು. ಬಳಿಕ ಕದ್ದ ಚಿನ್ನವನ್ನು ಶಿಕಾರಿಪುರದ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಅಡವಿಟ್ಟಿದ್ದನು.

ತಾಂತ್ರಿಕ ಕಾರ್ಯಾಚರಣೆ ಮತ್ತು ಪೊಲೀಸರಿಗೆ ಪ್ರಶಂಸೆ

ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಶ್ರೀ ಶಬರ್ ಹೆಚ್.ಟಿ. ಮತ್ತು ಹೆಚ್ಚುವರಿ ಎಸ್.ಪಿ ಶ್ರೀ ಪರಮೇಶ್ವರ ಹೆಗಡೆ ಹಾಗೂ ಚನ್ನಗಿರಿ ಡಿವೈಎಸ್ಪಿ ಶ್ರೀ ರುದ್ರಪ್ಪ ಎಸ್. ಉಜ್ಜಿನಕೊಪ್ಪ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದ್ದರು.

ನ್ಯಾಮತಿ ಸಿಪಿಐ ರವಿ ಎನ್.ಎಸ್. ನೇತೃತ್ವದ ತಂಡವು ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರ ಬಗ್ಗೆ ಮಾಹಿತಿ ಕಲೆಹಾಕಿ, ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪಿಎಸ್‌ಐ ಹೊಳಬಸಪ್ಪ ಹೋಳಿ ಮತ್ತು ಸಿಬ್ಬಂದಿಗಳಾದ ಶಿವರಾಜ್, ಆನಂದ್, ಸುನಿಲ್ ಕುಮಾರ್, ಮುರಳಿ, ನಾಗರಾಜನಾಯ್ಕ, ಮಲ್ಲೇಶಪ್ಪ, ದೇವರಾಜ್, ಪಂಪನಾಯ್ಕ, ರಾಮಪ್ಪ, ಮಹೇಶನಾಯ್ಕ, ಚನ್ನೇಶ್ ಹಾಗೂ ರಮೇಶ್ ಅವರ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

madhayakarnatakalive@gmail.com

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp