ದಾವಣಗೆರೆ: ರಾಜ್ಯದಲ್ಲಿ ಶತಮಾನ ಕಂಡ ಸುಮಾರು 3,900 ಐತಿಹಾಸಿಕ ಶಾಲೆಗಳಿದ್ದು, ಅಂತಹ ಅನೇಕ ಶಾಲೆಗಳು ಇಂದು ಮುಚ್ಚುವ ಆತಂಕಕಾರಿ ( ಶಾಲೆಗಳಿಗೆ ಬೀಗ) ಸ್ಥಿತಿಯಲ್ಲಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೊತ್ತಮ ಬಿಳೆಮಲೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಮತ್ತು ಕನ್ನಡ ಶಾಲೆಗಳ ಉಳಿವಿನ ಬಗ್ಗೆ ವಿಶೇಷ ಒತ್ತು ನೀಡಿದರು. ರಾಜ್ಯದ ಶಾಲೆಗಳ ಮೇಲೆ ಗಾಂಧೀಜಿ ಮತ್ತು ರವೀಂದ್ರನಾಥ ಟ್ಯಾಗೋರ್ ಅವರ ಪ್ರಭಾವ ಬೀರಿದೆ. ಹರಪನಹಳ್ಳಿ ಶಾಲೆಗೆ ಸ್ವತಃ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ್ದರು ಎಂಬುದು ಹೆಮ್ಮೆಯ ವಿಷಯ. ಈ ಹಿನ್ನೆಲೆಯಲ್ಲಿ ರಾಜ್ಯದ 19,700 ಶಾಲೆಗಳಿಗೆ ಹಕ್ಕುಪತ್ರಗಳನ್ನು ನೀಡಲು ಪ್ರಾಧಿಕಾರ ಸಹಕರಿಸಿದೆ ಎಂದರು.
ಖಾಸಗಿ ಶಾಲೆಗಳಲ್ಲೂ ನಾಡಗೀತೆ ಕಡ್ಡಾಯ
ಜಿಲ್ಲೆಯ ಕೆಲವು ಖಾಸಗಿ ಶಾಲೆಗಳಲ್ಲಿ ನಾಡಗೀತೆಯನ್ನು ಹಾಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಈ ಕೂಡಲೇ ಎಚ್ಚೆತ್ತುಕೊಂಡು ಎಲ್ಲಾ ಖಾಸಗಿ ಶಾಲೆಗಳಲ್ಲಿ ನಾಡಗೀತೆಯನ್ನು ಕಡ್ಡಾಯಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಇದೇ ವೇಳೆ ಶಾಲೆಗಳಲ್ಲಿ ‘ನಲಿ-ಕಲಿ’ ಕಲಿಕಾ ಪರಿಕಲ್ಪನೆಯನ್ನು ಯಶಸ್ವಿಗೊಳಿಸಲು ಪರಿಶೀಲನೆ ನಡೆಸಿ, ಮುಖ್ಯಮಂತ್ರಿಯವರಿಗೆ ವರದಿ ಸಲ್ಲಿಸಲಾಗುವುದು ಎಂದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಮದರಸಾಗಳಲ್ಲಿ ಕನ್ನಡ ಕಲಿ
ಉರ್ದು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಸುಲಭವಾಗಿಸಲು ಮಹತ್ವದ ಯೋಜನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ರಾಜ್ಯದ 180 ಮದರಸಾಗಳಲ್ಲಿ ಪ್ರಾಥಮಿಕ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗಿದ್ದು, 2026ರ ಮಾರ್ಚ್ ವೇಳೆಗೆ ಈ ಯೋಜನೆಯನ್ನು ಒಟ್ಟು 1,200 ಮದರಸಾಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ
“ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಬದುಕಿನ ಭಾಗ. ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವ ಮೂಲಕ ದಾವಣಗೆರೆ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಬೇಕು,” ಎಂದು ಕರೆ ನೀಡಿದ ಅವರು, ನಿರ್ಲಕ್ಷ್ಯ ತೋರುವವರ ವಿರುದ್ಧ ಗರಂ ಆದರು.
ಕನ್ನಡ ಅನುಷ್ಠಾನ ವಿಧೇಯಕ-2022ರ ಅನ್ವಯ, ಕನ್ನಡ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ನೇರ ಶಿಸ್ತು ಕ್ರಮ ಜರುಗಿಸುವ ಶಕ್ತಿಯುತ ಅಧಿಕಾರವಿದೆ. ಈಗಾಗಲೇ ಕೆಲವರ ಮೇಲೆ ಕ್ರಮ ಕೈಗೊಂಡು ವರ್ಗಾವಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾಯ್ದೆ ಇನ್ನಷ್ಟು ಬಲಿಷ್ಠಗೊಳ್ಳಲಿದ್ದು, ಆದೇಶ ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ಕಾದಿದೆ ಎಂದು ಎಚ್ಚರಿಸಿದರು. “ನಮ್ಮ ನೆಲದಲ್ಲಿ ಕನ್ನಡವೇ ಸಾರ್ವಭೌಮವಾಗಿರಬೇಕು. ಇಂಗ್ಲಿಷ್ ಕೇವಲ ಜಾಹೀರಾತಿನ ಭಾಷೆಯಾಗಿ ಬೆಳೆದಿದೆ, ಆದರೆ ಕನ್ನಡ ಬದುಕಿನ ಭಾಷೆ,” ಎಂದು ಪ್ರತಿಪಾದಿಸಿದರು.
ದಾವಣಗೆರೆ ಪಾಲಿಕೆಗೆ ಮೆಚ್ಚುಗೆ: 80 ಸಾವಿರ ದಂಡ ಸಂಗ್ರಹ!
ದಾವಣಗೆರೆಯಲ್ಲಿ ನಾಮಫಲಕಗಳಲ್ಲಿ ಶೇ. 60:40 ರಷ್ಟು ಕನ್ನಡ ಇರಬೇಕು ಎಂಬ ನಿಯಮವನ್ನು ಅತ್ಯುತ್ತಮವಾಗಿ ಜಾರಿಗೆ ತರಲಾಗಿದೆ. ಕಳೆದ ಒಂದು ವರ್ಷದಲ್ಲಿ ನಿಯಮ ಉಲ್ಲಂಘಿಸಿದವರಿಂದ ಮಹಾನಗರ ಪಾಲಿಕೆ ಬರೋಬ್ಬರಿ 80,000 ರೂ.ಗಳ ದಂಡ ಸಂಗ್ರಹಿಸಿದೆ. ಇದು ಇಡೀ ರಾಜ್ಯಕ್ಕೆ ಮಾದರಿ ಎಂದು ಅಧ್ಯಕ್ಷರು ಶ್ಲಾಘಿಸಿದರು. ವಿದೇಶಿ ಹೂಡಿಕೆ ಅಥವಾ ಬೇರೆ ರಾಜ್ಯದವರೇ ಕೈಗಾರಿಕೆ ನಡೆಸುತ್ತಿದ್ದರೂ ಅಲ್ಲಿ ಕನ್ನಡದ ವಾತಾವರಣ ಇರಬೇಕು ಎಂದು ತಾಕೀತು ಮಾಡಿದರು.
ವೈದ್ಯರ ಚೀಟಿ, ಪೋಸ್ಟ್ಮಾರ್ಟಂ ವರದಿಯೂ ಕನ್ನಡದಲ್ಲಿರಲಿ
ವೈದ್ಯಕೀಯ ರಂಗದಲ್ಲೂ ಕನ್ನಡ ಅಳವಡಿಕೆಗೆ ಅಧ್ಯಕ್ಷರು ಒತ್ತು ನೀಡಿದರು.
-
ವೈದ್ಯರು ರೋಗಿಗಳ ಹೆಸರನ್ನು ಕಡ್ಡಾಯವಾಗಿ ಕನ್ನಡದಲ್ಲಿ ಬರೆಯಬೇಕು.
-
ಖಾಸಗಿ ಆಸ್ಪತ್ರೆಗಳಲ್ಲೂ ಹಂತ ಹಂತವಾಗಿ ಕನ್ನಡ ಜಾರಿಯಾಗಬೇಕು.
-
ಜನಸಾಮಾನ್ಯರಿಗೆ ಅರ್ಥವಾಗುವಂತೆ ಮರಣ ಪ್ರಮಾಣ ಪತ್ರ ಹಾಗೂ ಪೋಸ್ಟ್ಮಾರ್ಟಂ ವರದಿಗಳು ಕನ್ನಡದಲ್ಲೇ ಇರಬೇಕು. ಈ ಪ್ರಸ್ತಾವನೆಗೆ ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು, ಜಾರಿಗೆ ತರಲು ಸೂಚಿಸಲಾಗಿದೆ.
ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ?
2026-27ನೇ ಸಾಲಿನಲ್ಲಿ ‘ವಿಶ್ವ ಕನ್ನಡ ಸಮ್ಮೇಳನ’ವನ್ನು ದಾವಣಗೆರೆಯಲ್ಲಿ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಡಾ. ಪುರುಷೊತ್ತಮ ಬಿಳೆಮಲೆ ತಿಳಿಸಿದರು. ಅಲ್ಲದೆ, ಚನ್ನಗಿರಿ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಿಸಲು ಜಾಗ ಗುರುತಿಸಲಾಗಿದ್ದು, ಮುಂದಿನ ಬಜೆಟ್ನಲ್ಲಿ ಅನುದಾನ ಒದಗಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ಸದಸ್ಯರಾದ ಡಾ. ಎ.ಬಿ. ರಾಮಚಂದ್ರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಾಮದೇವಪ್ಪ ಮತ್ತು ಸದಸ್ಯರು ಉಪಸ್ಥಿತರಿದ್ದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

