ಹರಿಹರ: ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ವದಂತಿಗಳಿಗೆ ತೆರೆ ಎಳೆದಿರುವ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, “ನಾನು ಪೀಠದಲ್ಲೇ ಇದ್ದೇನೆ, ಮುಂದೆಯೂ ಇಲ್ಲೇ ಇರುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಪೀಠದ ಆವರಣದಿಂದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಮಠದ ಅಭಿವೃದ್ಧಿ ಮತ್ತು ಸಮುದಾಯದ ಏಳಿಗೆಯ ಕುರಿತು ತಮ್ಮ ಮುಂದಿನ ನಡೆಗಳನ್ನು ಹಂಚಿಕೊಂಡಿದ್ದಾರೆ.
ಟೀಕೆಗಳೇ ನಮಗೆ ಮೆಟ್ಟಿಲು
ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ಶ್ರೀಗಳು, “ನಿಂದಕರೇ ನಮ್ಮ ವಂದಕರು, ಅವಮಾನವೇ ನಮ್ಮ ಸನ್ಮಾನ. ಮುಳ್ಳಿನ ಹಾದಿಯನ್ನೇ ರಾಜಬೀದಿಯೆಂದು ಭಾವಿಸಿ ನಾವು ನಡೆಯುತ್ತಿದ್ದೇವೆ. ದ್ವೇಷ ಸಾಧನೆ ಮಾಡಲು ನಮ್ಮ ಬಳಿ ಸಮಯವಿಲ್ಲ. ಪೀಠದ ಘನತೆಯನ್ನು ಎತ್ತಿ ಹಿಡಿಯುವುದೇ ನಮ್ಮ ಮೊದಲ ಆದ್ಯತೆ” ಎಂದು ತಿಳಿಸಿದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಪಂಚ ದಾಸೋಹ ಪೀಠದ ಗುರಿ
ಹರಪೀಠವನ್ನು ಕೇವಲ ಧಾರ್ಮಿಕ ಕೇಂದ್ರವನ್ನಾಗಿ ಮಾತ್ರವಲ್ಲದೆ, ಸೇವೆಯ ತಾಣವನ್ನಾಗಿ ಮಾಡುವ ಕನಸನ್ನು ಶ್ರೀಗಳು ಬಿಚ್ಚಿಟ್ಟಿದ್ದಾರೆ. “ಪ್ರಸ್ತುತ ಪೀಠದಲ್ಲಿ ಅನ್ನ, ಅಕ್ಷರ ಮತ್ತು ಆಶ್ರಯ ದಾಸೋಹಗಳು ನಡೆಯುತ್ತಿವೆ. ಇದನ್ನು ಮುಂದಿನ ದಿನಗಳಲ್ಲಿ ಆರೋಗ್ಯ ದಾಸೋಹ ಮತ್ತು ಆಧ್ಯಾತ್ಮ ದಾಸೋಹವನ್ನೊಳಗೊಂಡ ‘ಪಂಚ ದಾಸೋಹ’ ಕೇಂದ್ರವನ್ನಾಗಿ ಪರಿವರ್ತಿಸುವುದು ನಮ್ಮ ಸಂಕಲ್ಪ” ಎಂದರು.
ಸಮುದಾಯದ ಅಸ್ಮಿತೆಗೆ ಬದ್ಧ
2018ರಲ್ಲಿ ಪೀಠದ ಜವಾಬ್ದಾರಿ ವಹಿಸಿಕೊಂಡಾಗಿನಿಂದಲೂ ಸಮುದಾಯದ ಅಸ್ಮಿತೆ ಮತ್ತು ನ್ಯಾಯಯುತ ಬೇಡಿಕೆಗಳಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಾ ಬಂದಿರುವುದಾಗಿ ಶ್ರೀಗಳು ನೆನಪಿಸಿದರು. “ನಾವು ಮಾಡಬೇಕಾದ ಕಾರ್ಯಗಳು ಸಾಗರದಷ್ಟಿವೆ. ಸೂಕ್ತ ಸಮಯದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲಾಗುವುದು. ಸದ್ಯಕ್ಕೆ ನಮ್ಮ ಗಮನ ಕೇವಲ ಸಮಾಜದ ಸ್ವಾಸ್ಥ್ಯದ ಕಡೆಗಿದೆ” ಎಂದು ಅವರು ಹೇಳಿದರು.
ಲಿಂಗೈಕ್ಯ ಮಹಾಂತಪ್ಪಗಳ ಆಶೀರ್ವಾದ ಪಡೆಯಲು ಮತ್ತು ಪೀಠದ ಅಭಿವೃದ್ಧಿಯಲ್ಲಿ ಕೈಜೋಡಿಸಲು ಭಕ್ತರಿಗೆ ಕರೆ ನೀಡಿದ ಶ್ರೀಗಳು, ಯೋಗಯುಕ್ತ ಮತ್ತು ರೋಗಮುಕ್ತ ಸಮಾಜ ನಿರ್ಮಾಣದ ತಮ್ಮ ಅಭಿಯಾನ ಮುಂದುವರಿಯಲಿದೆ ಎಂದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
