ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶದ ಎರಡನೇ ಜೋನ್ ವ್ಯಾಪ್ತಿಗೆ ಸೇರಿದರೂ ಕಳೆದ ಒಂದೂವರೆ ತಿಂಗಳಿಂದ ಕಾಲುವೆಯಲ್ಲಿ ನೀರು ಹರಿಸಿಲ್ಲ. ಇದರಿಂದಾಗಿ ಬೆಳೆಗಳು ಒಣಗುತ್ತಿದ್ದು, ಕೂಡಲೇ ನೀರು ಹರಿಸುವಂತೆ ಆಗ್ರಹಿಸಿ ಕುಕ್ಕುವಾಡ ಭಾಗದ ರೈತರು ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆಯಿತು.
ಕುಕ್ಕುವಾಡ ಗ್ರಾಮದಲ್ಲಿ ನಡೆದ ರೈತರು ಮತ್ತು ನೀರಾವರಿ ಅಧಿಕಾರಿಗಳ ಸಭೆಯಲ್ಲಿ, ರೈತರು “ನಮ್ಮ ನೀರು ನಮಗೆ ಕೊಡಿ” ಎಂದು ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಒಂದೂವರೆ ತಿಂಗಳಾದರೂ ನೀರಿಲ್ಲ
ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಎರಡನೇ ಜೋನ್ಗೆ ನೀರು ಬಿಡಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಕುಕ್ಕುವಾಡ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಕಳೆದ ಒಂದೂವರೆ ತಿಂಗಳಿಂದ ನೀರು ತಲುಪಿಲ್ಲ. ಇದರಿಂದಾಗಿ ಬತ್ತ, ಕಬ್ಬು ಸೇರಿದಂತೆ ಪ್ರಮುಖ ಬೆಳೆಗಳು ಒಣಗುತ್ತಿವೆ. ರೈತರು ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗುವ ಮುನ್ನವೇ ನಾಶವಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ನೀರು ನಿರ್ವಹಣೆಯಲ್ಲಿ ಇಲಾಖೆ ವಿಫಲ
ಕಾಲುವೆಯಲ್ಲಿ ನೀರು ಹರಿಯುವ ಸಾಮರ್ಥ್ಯ 225 ಕ್ಯೂಸೆಕ್ ಇದ್ದರೂ, ಕೇವಲ 180 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಕಾಲುವೆಯಲ್ಲಿ ಹೂಳು ತುಂಬಿದ್ದು, ಗಿಡಗಂಟಿಗಳು ಬೆಳೆದಿವೆ. ಇವುಗಳನ್ನು ಸ್ವಚ್ಛಗೊಳಿಸದ ಕಾರಣ ನೀರು ಸರಾಗವಾಗಿ ಹರಿಯುತ್ತಿಲ್ಲ. ಇಲಾಖೆಯ ನಿರ್ಲಕ್ಷ್ಯದಿಂದಲೇ ರೈತರಿಗೆ ಸಮರ್ಪಕ ನೀರು ಸಿಗುತ್ತಿಲ್ಲ ಎಂದು ರೈತ ಮುಖಂಡರು ಆರೋಪಿಸಿದರು.
ರೈತರ ಪ್ರಮುಖ ಬೇಡಿಕೆಗಳು
ರೋಟೇಷನ್ ಬದಲಾವಣೆ: ಮೊದಲ ರೋಟೇಷನ್ನಲ್ಲಿ ಈಗಿರುವ 6 ದಿನಗಳ ಬದಲಿಗೆ 10 ದಿನಗಳ ಕಾಲ ನೀರು ಹರಿಸಬೇಕು.
ಕಾಲುವೆ ದುರಸ್ತಿ: ತಕ್ಷಣವೇ ಕಾಲುವೆಯಲ್ಲಿರುವ ಹೂಳು ಮತ್ತು ಗಿಡಗಂಟಿಗಳನ್ನು ತೆರವುಗೊಳಿಸಿ, ಪೂರ್ಣ ಪ್ರಮಾಣದ ನೀರು ಹರಿಸಬೇಕು.
ಸಮರ್ಪಕ ನೀರು: ಎರಡನೇ ಜೋನ್ನ ಶೇ.50 ರಷ್ಟು ಜಮೀನಿನಲ್ಲಿ ಇನ್ನೂ ನಾಟಿ ಕಾರ್ಯ ನಡೆದಿಲ್ಲ. ಕೂಡಲೇ ನೀರು ಹರಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು.
ನಾಳೆಯಿಂದಲೇ ನೀರು: ಅಧಿಕಾರಿಗಳ ಭರವಸೆ
ರೈತರ ಆಕ್ರೋಶಕ್ಕೆ ಮಣಿದ ಎಇ ರಾಜೇಶ್ ಅವರು, “ನಾಳೆಯಿಂದಲೇ ಮೇಲ್ಭಾಗದಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಮೊದಲ ರೋಟೇಷನ್ನಲ್ಲಿ ಉಳಿದ ನಾಲ್ಕು ದಿನಗಳ ನೀರನ್ನು ಸೇರಿಸಿ ಹರಿಸಲಾಗುವುದು,” ಎಂದು ಭರವಸೆ ನೀಡಿದರು.
ತೇಜಸ್ವಿ ಪಟೇಲ್ ಮಾತನಾಡಿ: “ನೀರು ನಿರ್ವಹಣೆಯಲ್ಲಿ ವಿಫಲ ಎಂದು ಭಾವಿಸಿದ್ದೇವೆ. 2ನೇ ಜೋನ್ಗೆ ನೀರು ಹರಿಯುವ ಸಾಮರ್ಥ್ಯ ಇರುವಾಗ 225 ಕ್ಯೂಸೆಕ್ ಇತ್ತು, ಈಗ 180 ಕ್ಯೂಸೆಕ್ ಗೆ ಇಳಿದಿದೆ. ನಿರ್ವಹಣೆ ವೈಫಲ್ಯದಿಂದ ರೈತರಿಗೆ ನೀರು ಸಿಗುತ್ತಿಲ್ಲ ಎಂಬುದನ್ನು ಈ ಹಿಂದಿನ ಸಾಲಿನ ಅಧ್ಯಕ್ಷ ಹಾಗೂ ಸದಸ್ಯರು ಜಿಲ್ಲಾಧಿಕಾರಿಗಳಿಗೆ ನೀರು ಹರಿಸಿ ತೋರಿದ್ದರು. ಈ ಹೊಸದಾಗಿ ಬಂದಿರುವ ಹೋರಾಟಗಾರರು ನೀರು ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ.”
ರೈತ ಸಂಚಾಲಕರಾದ ಚನ್ನಬಸಪ್ಪ ಮಾತನಾಡಿ, “ರೈತರ ಸಮಸ್ಯೆಗಳನ್ನು ಬಗೆಹರಿಸಿ, ಅವ್ಯವಸ್ಥೆಯನ್ನು ಸರಿಪಡಿಸಿಕೊಂಡು ಕೂಡಲೇ ನೀರು ಹರಿಸಬೇಕು. ಇಲ್ಲದಿದ್ದರೆ ರೈತರೆಲ್ಲ ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದರು.
ವರದಿ: ಮಧ್ಯಕರ್ನಾಟಕ ಲೈವ್ (Madhyakarnataka.live)
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
