ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಹೂಗಳ ಜಾತ್ರೆ ಶುರುವಾಗಿದೆ. ಬೆಂಗಳೂರಿನ ಲಾಲ್ಬಾಗ್ ಮಾದರಿಯಲ್ಲಿ ಆಯೋಜನೆಗೊಂಡಿರುವ ’33ನೇ ಫಲ-ಪುಷ್ಪ ಪ್ರದರ್ಶನ’ ನೋಡುಗರ ಕಣ್ಮನ ಸೆಳೆಯುತ್ತಿದೆ. ಬಗೆಬಗೆಯ ಹೂವುಗಳು, ಆಕರ್ಷಕ ಕಲಾಕೃತಿಗಳು, ಮತ್ಸ್ಯ ಪ್ರದರ್ಶನಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಆಶ್ರಯದಲ್ಲಿ ನಗರದ ವಿ.ಪಿ.ಬಡಾವಣೆಯ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಶುಕ್ರವಾರ ಈ ಮೂರು ದಿನಗಳ ಅದ್ಧೂರಿ ಫಲ-ಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಚಾಲನೆ ನೀಡಿದರು.
ಈ ಬಾರಿಯ ಫಲ-ಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು:
-
ಹೂವಿನಲ್ಲಿ ಅರಳಿದ ಕಲಾಕೃತಿಗಳು: ನಾಯಕನಹಟ್ಟಿ ಶ್ರೀ ಕ್ಷೇತ್ರದ ಶ್ರೀ ತಿಪ್ಪೇರುದ್ರಸ್ವಾಮಿ, ವೀರವನಿತೆ ಒನಕೆ ಓಬವ್ವ, ಒಳಮಠ ಹಾಗೂ ಹೊರಮಠದ ಕಲಾಕೃತಿಗಳು ನೋಡುಗರ ಗಮನ ಸೆಳೆಯುತ್ತಿವೆ.
-
ಸಾಹಿತ್ಯಕ್ಕೆ ಹೂವಿನ ನಮನ: ಹೆಸರಾಂತ ಸಾಹಿತಿ ಬಿ.ಎಲ್.ವೇಣು ಅವರ ಪ್ರತಿಮೆ ಹಾಗೂ ಅವರು ರಚಿಸಿದ ಕಾದಂಬರಿಗಳನ್ನು ಕಲ್ಲು ಬಂಡೆಗಳ ಮೇಲೆ ಕೆತ್ತಿ ಪ್ರದರ್ಶನಕ್ಕೆ ಇಡಲಾಗಿದೆ.
-
ಹೂವಿನ ಟಾಂಗಾ ಹಾಗೂ ಮತ್ಸ್ಯ ಲೋಕ: ಆಕರ್ಷಕ ಹೂವಿನ ಟಾಂಗಾ ಮತ್ತು ಬಗೆಬಗೆಯ ಮೀನುಗಳಿರುವ ಮತ್ಸ್ಯ ಪ್ರದರ್ಶನ ಮಕ್ಕಳನ್ನು ಸೆಳೆಯುತ್ತಿದೆ.
ಬದುಕಿರುವಾಗಲೇ ಸಿಕ್ಕ ಗೌರವಕ್ಕೆ ಭಾವುಕರಾದ ಸಾಹಿತಿ ಬಿ.ಎಲ್. ವೇಣು! ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹಿರಿಯ ಸಾಹಿತಿ ಬಿ.ಎಲ್. ವೇಣು ಅವರು ತೀವ್ರ ಭಾವುಕರಾದರು. “ಸಾಮಾನ್ಯವಾಗಿ ಇಂತಹ ಗೌರವಗಳು ಸಾಹಿತಿ ಸತ್ತ ಮೇಲೆ ಸಿಗುತ್ತವೆ. ಆದರೆ ನಾನು ಬದುಕಿರುವಾಗಲೇ ನನ್ನ ಪ್ರತಿಮೆ ಹಾಗೂ ಕಾದಂಬರಿಗಳನ್ನು ಈ ರೀತಿ ಪ್ರದರ್ಶನಕ್ಕೆ ಇಟ್ಟು ತೋಟಗಾರಿಕೆ ಇಲಾಖೆ ಗೌರವಿಸಿರುವುದು ನನ್ನ ಪುಣ್ಯ. ಅನಾರೋಗ್ಯ ಹಾಗೂ ಮಂಡಿ ನೋವು ಇದ್ದರೂ, ಇಲಾಖೆ ತೋರಿದ ಪ್ರೀತಿಗಾಗಿ ಇಲ್ಲಿಗೆ ಬಂದಿದ್ದೇನೆ” ಎಂದು ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ತಮ್ಮ ಸಾಹಿತ್ಯ, ಚಲನಚಿತ್ರ ಯಾನ ಹಾಗೂ ತಮಗೆ ಒಲಿದು ಬಂದ ಪ್ರಶಸ್ತಿ, ಪುರಸ್ಕಾರಗಳನ್ನು ಈ ವೇಳೆ ಮೆಲುಕು ಹಾಕಿದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಲಾಲ್ಬಾಗ್ಗೆ ಹೋಗಬೇಕಿಲ್ಲ, ಮುಂದಿನ ದಿನಗಳಲ್ಲಿ ಮತ್ತಷ್ಟು ಅದ್ಧೂರಿ: ಸಚಿವ ಸುಧಾಕರ್ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಸಚಿವ ಡಿ.ಸುಧಾಕರ್, “ಹಿಂದೆಲ್ಲಾ ಇಂತಹ ಅದ್ಭುತ ಪ್ರದರ್ಶನಗಳನ್ನು ನೋಡಲು ಬೆಂಗಳೂರಿನ ಲಾಲ್ಬಾಗ್ಗೇ ಹೋಗಬೇಕಿತ್ತು. ಆದರೆ ಕಳೆದ 3-4 ದಶಕಗಳಿಂದ ಚಿತ್ರದುರ್ಗದಲ್ಲಿಯೇ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಏರ್ಪಡಿಸಲಾಗುವುದು” ಎಂದರು.
ರೈತರಿಗೆ ಕರೆ & ಭದ್ರಾ ನೀರಿನ ಅಪ್ಡೇಟ್:
-
ತೋಟಗಾರಿಕೆಗೆ ಒತ್ತು ನೀಡಿ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾದರಿಯಲ್ಲಿ ಚಿತ್ರದುರ್ಗ ಜಿಲ್ಲೆಯ ರೈತರೂ ಕೂಡ ತೋಟಗಾರಿಕೆ ಬೆಳೆಗಳ ವಿಸ್ತೀರ್ಣವನ್ನು ಹೆಚ್ಚಿಸಬೇಕು. ಸಾಮಾನ್ಯ ಬೆಳೆಗಳಿಗಿಂತ ಇವು ಆರ್ಥಿಕವಾಗಿ ಹೆಚ್ಚು ಲಾಭದಾಯಕ ಎಂದು ಸಚಿವರು ಸಲಹೆ ನೀಡಿದರು.
-
ಮಾರ್ಚ್ ಅಂತ್ಯಕ್ಕೆ ಭದ್ರಾ ನೀರು: ಜಿಲ್ಲೆಗೆ ಭದ್ರಾ ನೀರನ್ನು ಫೆಬ್ರವರಿ ಅಂತ್ಯದೊಳಗೆ ಪ್ರಾಯೋಗಿಕವಾಗಿ ಹರಿಸಲು ಯೋಜಿಸಲಾಗಿತ್ತು. ಆದರೆ, ಕೆಲವು ತಾಂತ್ರಿಕ ಅಡೆತಡೆಗಳಿಂದ ವಿಳಂಬವಾಗಿದೆ. ಮುಂದಿನ ತಿಂಗಳ (ಮಾರ್ಚ್) ಅಂತ್ಯದೊಳಗೆ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿ.ಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ತೋಟಗಾರಿಕೆ ಜಂಟಿ ನಿರ್ದೇಶಕಿ ಜಿ.ಸವಿತಾ, ಜಲತಜ್ಞ ದೇವರಾಜ ರೆಡ್ಡಿ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
