ಹರಿಹರ ಪಂಚಮಸಾಲಿ ಮಠದಿಂದ ಪದಚ್ಯುತಿ ವಿವಾದ: ವಚನಾನಂದ ಸ್ವಾಮೀಜಿ ‘ಫಸ್ಟ್ ರಿಯಾಕ್ಷನ್’ – “ಭಕ್ತರೇ ನನ್ನ ದೇವರು, ಮಠ 12 ಜನರ ಆಸ್ತಿಯಲ್ಲ!”

ವಚನಾನಂದ ಸ್ವಾಮೀಜಿ ಹರಿಹರ ಪಂಚಮಸಾಲಿ ಮಠದ ಪದಚ್ಯುತಿ ವಿವಾದದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವುದು

—Advertisement—

ದಾವಣಗೆರೆ/ಹರಿಹರ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಅವರನ್ನು ಮಠದ ಟ್ರಸ್ಟ್‌ನಿಂದ ಪದಚ್ಯುತಿಗೊಳಿಸಲಾಗಿದೆ ಎಂಬ ವಿವಾದ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಖುದ್ದು ವಚನಾನಂದ ಸ್ವಾಮೀಜಿ ಮಾಧ್ಯಮಗಳಿಗೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. “ಈ ಮಠ ಕೇವಲ 12 ಜನ ಟ್ರಸ್ಟಿಗಳ ಆಸ್ತಿಯಲ್ಲ, ಇದು ಅಖಂಡ ಪಂಚಮಸಾಲಿ ಸಮಾಜದ ಲಕ್ಷಾಂತರ ಭಕ್ತರ ಆಸ್ತಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಯ ಮುಖ್ಯಾಂಶಗಳು:

​ಪದಚ್ಯುತಿ ಬಗ್ಗೆ ನನಗೆ ಯಾವುದೇ ಅಧಿಕೃತ ನೋಟಿಸ್ ಬಂದಿಲ್ಲ. ರಾತ್ರೋರಾತ್ರಿ ಕದ್ದುಮುಚ್ಚಿ ನಿರ್ಧಾರ ಕೈಗೊಳ್ಳಲಾಗಿದೆ.

​ಸರ್ಕಾರ ಕೊಟ್ಟ ಅನುದಾನದಲ್ಲಿ ಒಂದೇ ಒಂದು ರೂಪಾಯಿ ಕೂಡ ದುರ್ಬಳಕೆ ಆಗಿಲ್ಲ, ಪ್ರತಿಯೊಂದಕ್ಕೂ ನಿಖರವಾದ ದಾಖಲೆ ಹಾಗೂ ಲೆಕ್ಕವಿದೆ.

​ಮಠದ ಆಸ್ತಿಯನ್ನು ತಮ್ಮ ಸ್ವಂತ ಹೆಸರಿಗೆ ಹಾಗೂ ತಮ್ಮ ಪ್ರೈವೇಟ್ ಟ್ರಸ್ಟ್‌ಗಳಿಗೆ ಬರೆದುಕೊಳ್ಳಲು ಕೆಲವರಿಂದ ಹುನ್ನಾರ.

​ಭಕ್ತರೇ ನನಗೆ ಭಗವಂತ. ಸಮಾಜವೇ ಸುಪ್ರೀಂ. ಭಕ್ತರು ಹೇಳಿದರೆ ಮಾತ್ರ ನಾನು ನಿರ್ಧಾರ ಕೈಗೊಳ್ಳುತ್ತೇನೆ. ನನಗೆ ಯಾವುದೇ ಭಯವಿಲ್ಲ.

“ನನಗೆ ನೋಟಿಸ್ ನೀಡಿಲ್ಲ, ಕದ್ದುಮುಚ್ಚಿ ಸಭೆ ಮಾಡಿದ್ದಾರೆ”

ತಮ್ಮ ಪದಚ್ಯುತಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, “ಮಠದ 12 ಜನ ಟ್ರಸ್ಟಿಗಳು ರಾತ್ರೋರಾತ್ರಿ ಸಭೆ ಮಾಡಿ, ನನ್ನ ಗಮನಕ್ಕೂ ತರದೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅಧಿಕೃತವಾಗಿ ನನಗೆ ಯಾವುದೇ ನೋಟಿಸ್ ನೀಡಿಲ್ಲ. ನಾನು ಕೊಡಗಿನ ಕಾರ್ಯಕ್ರಮದಲ್ಲಿದ್ದಾಗ, ಮಠದ ಗೇಟಿಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಈ ಮಠ ಕೇವಲ ಆ 12 ಜನರದ್ದಲ್ಲ. ಇದು ಅಖಂಡ ಪಂಚಮಸಾಲಿ ಸಮಾಜದ ಮಠ. ನನಗೆ ಭಕ್ತರೇ ದೇವರು,” ಎಂದು ಕಿಡಿಕಾರಿದರು.

 

ಮಠದ ಆಸ್ತಿ ಕಬಳಿಸುವ ಹುನ್ನಾರ

“ಕೆಲವರು ಮಠದ ಆಸ್ತಿಪಾಸ್ತಿಗಳನ್ನು ತಮ್ಮ ಸ್ವಂತ ಹೆಸರಿಗೆ ಬರೆದುಕೊಳ್ಳುವ ಹುನ್ನಾರ ನಡೆಸಿದ್ದಾರೆ. ಮಠದ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಜಾಗವನ್ನು ತಮ್ಮ ಸ್ವಂತ ಟ್ರಸ್ಟ್ ಮಾಡಿಕೊಂಡು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ. ಸಮಾಜದ ಮಠವನ್ನು ಪ್ರೈವೇಟ್ ಲಿಮಿಟೆಡ್ ಕಂಪನಿಯಂತೆ ನಡೆಸಲು ಹೊರಟಿದ್ದಾರೆ,” ಎಂದು ಸ್ವಾಮೀಜಿ ಟ್ರಸ್ಟಿಗಳ ವಿರುದ್ಧ ಗಂಭೀರ ಆರೋಪ ಮಾಡಿದರು.

​”ಒಂದು ರೂಪಾಯಿ ಭ್ರಷ್ಟಾಚಾರವಾಗಿಲ್ಲ, ಎಲ್ಲದಕ್ಕೂ ಲೆಕ್ಕವಿದೆ”

ಮಠದ ಆರ್ಥಿಕ ವ್ಯವಹಾರಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, “2008ರಲ್ಲಿ ಪೀಠ ಆರಂಭವಾದಾಗಿನಿಂದ ಇಲ್ಲಿಯವರೆಗೆ ನಡೆದಿರುವ ಪ್ರತಿಯೊಂದು ವ್ಯವಹಾರಕ್ಕೂ ಲೆಕ್ಕವಿದೆ. ಸರ್ಕಾರದಿಂದ ಬಂದ 10 ಕೋಟಿ ಹಾಗೂ 1 ಕೋಟಿ ಅನುದಾನದ ಪ್ರತಿಯೊಂದು ರೂಪಾಯಿಗೂ ದಾಖಲೆಗಳಿವೆ. ಒಂದೇ ಒಂದು ರೂಪಾಯಿ ಕೂಡ ದುರ್ಬಳಕೆಯಾಗಿಲ್ಲ. ಅಷ್ಟೇ ಅಲ್ಲದೆ, ಮಠದ ಸಿ.ಸಿ. ಕ್ಯಾಮೆರಾ ಹಾಗೂ ಡಿವಿಆರ್ ಅನ್ನು ಕೂಡ ಆ 12 ಜನರೇ ಕದ್ದೊಯ್ದಿದ್ದಾರೆ” ಎಂದು ದೂರಿದರು.

​”ಆಂಟಿ-ಹಿಂದೂ, ಆಂಟಿ-ಲಿಂಗಾಯತ ಶಕ್ತಿಗಳ ಕೈವಾಡ”

ಈ ಷಡ್ಯಂತ್ರದ ಹಿಂದೆ ಕೆಲವು ಆಂಟಿ-ಹಿಂದೂ ಮತ್ತು ಆಂಟಿ-ಲಿಂಗಾಯತ ಮನಸ್ಥಿತಿಯ ಜನರ ಕೈವಾಡವಿದೆ ಎಂದ ಸ್ವಾಮೀಜಿ, ಸಮಾಜವನ್ನು ಒಡೆಯುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದರು. “ಸಮಾಜವೇ ಸುಪ್ರೀಂ, ಭಕ್ತರೇ ನನ್ನ ಪಾಲಿನ ದೇವರು. ಅವರು ನನಗೆ ಪ್ರಸಾದ ಕೊಟ್ಟಿದ್ದಾರೆ. ಭಕ್ತರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ನನಗೆ ಯಾವುದೇ ಆತಂಕವಿಲ್ಲ, ಸತ್ಯದ ಪರವಾಗಿ ನಿಲ್ಲುವ ನೂರಕ್ಕೆ ನೂರು ವಿಶ್ವಾಸವಿದೆ” ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp