ಚಿಕ್ಕಜಾಜೂರು ರೈಲ್ವೆ ನಿಲ್ದಾಣದಲ್ಲಿ ದಾರಿ ತಪ್ಪಿದ್ದ ಬೆಳಗಾವಿ ಯುವಕನ ರಕ್ಷಣೆ: ಸಕಾಲದಲ್ಲಿ ಸ್ಪಂದಿಸಿ ಮಾನವೀಯತೆ ಮೆರೆದ 112 ಸಹಾಯವಾಣಿ ಸಿಬ್ಬಂದಿ!

chitradurga-holalkere-chikkajajuru-railway-station-112-emergency-police-rescue-belagavi-youth

—Election Update—

ಚಿತ್ರದುರ್ಗ: ಸಂಕಷ್ಟದಲ್ಲಿರುವ ಸಾರ್ವಜನಿಕರ ಪಾಲಿಗೆ ಸಂಜೀವಿನಿಯಂತಿರುವ ರಾಜ್ಯ ಸರ್ಕಾರದ ‘ತುರ್ತು ಸ್ಪಂದನ ಸಹಾಯ ವ್ಯವಸ್ಥೆ-112’ (ERSS) ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ಮಾನವೀಯತೆ ಮೆರೆದಿದೆ. ಹಣ ಮತ್ತು ಮೊಬೈಲ್ ಕಳೆದುಕೊಂಡು, ದಾರಿ ತಿಳಿಯದೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ರೈಲ್ವೆ ನಿಲ್ದಾಣದಲ್ಲಿ ಅಸಹಾಯಕರಾಗಿ ನಿಂತಿದ್ದ ಬೆಳಗಾವಿ ಮೂಲದ ಮಾನಸಿಕ ಅಸ್ವಸ್ಥ ಯುವಕನನ್ನು ರಕ್ಷಿಸಿ, ಆತನ ಕುಟುಂಬದವರ ವಶಕ್ಕೆ ಒಪ್ಪಿಸುವಲ್ಲಿ 112 ಹಾಗೂ ಅಕ್ಷಪಡೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಘಟನೆಯ ಹಿನ್ನೆಲೆ:

ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯುವಕನೊಬ್ಬ ದಿನಾಂಕ 03.06.2026 ರಂದು ರೈಲಿನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದನು. ಈ ವೇಳೆ ಆಕಸ್ಮಿಕವಾಗಿ ಆತನ ಬಳಿಯಿದ್ದ ಹಣ ಹಾಗೂ ಮೊಬೈಲ್ ಫೋನ್ ಕಳೆದುಹೋಗಿದೆ. ಇದರಿಂದ ತೀವ್ರ ಆತಂಕಕ್ಕೊಳಗಾದ ಯುವಕ, ಮುಂದೆ ಏನು ಮಾಡಬೇಕೆಂದು ತೋಚದೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ರೈಲ್ವೆ ನಿಲ್ದಾಣದಲ್ಲೇ ಇಳಿದುಕೊಂಡಿದ್ದಾನೆ.

ಯುವಕನು ಮಾನಸಿಕವಾಗಿ ಸ್ವಲ್ಪ ಅಸ್ವಸ್ಥನಾಗಿದ್ದನ್ನು ಗಮನಿಸಿದ ಸ್ಥಳೀಯ ನಾಗರಿಕರು ಆತನನ್ನು ಹತ್ತಿರ ಕರೆದು ವಿಚಾರಿಸಿದ್ದಾರೆ. ಈ ವೇಳೆ ಆತನ ಜೇಬಿನಲ್ಲಿದ್ದ ಒಂದು ಮೊಬೈಲ್ ಸಂಖ್ಯೆಯನ್ನು ಪಡೆದು ಸಾರ್ವಜನಿಕರು ಕರೆ ಮಾಡಿದಾಗ, ಅದು ಆ ಯುವಕನ ಅಣ್ಣನ ನಂಬರ್ ಎಂದು ತಿಳಿದುಬಂದಿದೆ. ತಕ್ಷಣವೇ ಯುವಕನ ಅಣ್ಣ 112 ತುರ್ತು ಸಹಾಯವಾಣಿಗೆ ಕರೆ ಮಾಡಿ, ತನ್ನ ತಮ್ಮ ಚಿಕ್ಕಜಾಜೂರು ರೈಲ್ವೆ ಸ್ಟೇಷನ್ ಬಳಿ ಇರುವ ಬಗ್ಗೆ ಮಾಹಿತಿ ನೀಡಿ ಸಹಾಯ ಕೋರಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು:

ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಇ.ಆರ್.ಎಸ್.ಎಸ್-112 ಕೇಂದ್ರದ ಸಿಬ್ಬಂದಿಯಾದ ನಾಗಮಣಿ (ಮ.ಪಿ.ಸಿ-2677) ಅವರು ತಕ್ಷಣವೇ ಈ ಕುರಿತು ಹೊಯ್ಸಳ-04 ವಾಹನಕ್ಕೆ ಸಂದೇಶ ರವಾನಿಸಿದ್ದಾರೆ. ಕೂಡಲೇ ಹೊಯ್ಸಳ ವಾಹನದ ಅಧಿಕಾರಿ ಶಿವಾನಂದ ಪಾಟೀಲ್ ಮತ್ತು ಚಾಲಕ ದೇವರಾಜ್ ಎಸ್. ಅವರು ಕ್ಷಣಮಾತ್ರದಲ್ಲಿ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಧಾವಿಸಿದ್ದಾರೆ.

ರೈಲ್ವೆ ನಿಲ್ದಾಣದ ಬಳಿ ಇದ್ದ ಯುವಕನನ್ನು ವಿಚಾರಿಸಿದಾಗ ಆತ ತನ್ನ ಹೆಸರು ಆದಿತ್ಯ ಅಜಿತ್ ರಾಣುಗೋಳೆ ಎಂದು ತಿಳಿಸಿದ್ದಾನೆ. ಆದರೆ ಮಾನಸಿಕ ಅಸ್ವಸ್ಥತೆಯ ಕಾರಣದಿಂದ ಆತನಿಗೆ ತನ್ನ ಪೂರ್ಣ ವಿಳಾಸವನ್ನು ಹೇಳಲು ಸಾಧ್ಯವಾಗಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಹೊಯ್ಸಳ ಸಿಬ್ಬಂದಿ ಮೊದಲು ಯುವಕನನ್ನು ರೈಲ್ವೆ ಪೊಲೀಸರ ವಶಕ್ಕೆ ನೀಡಿ, ನಂತರ ಅಕ್ಷಪಡೆಯವರ ನೆರವಿನೊಂದಿಗೆ ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸಿದ್ದರು.

ಅಣ್ಣನ ವಶಕ್ಕೆ ಸೇರಿದ ತಮ್ಮ:

ಮರುದಿನ ಯುವಕನ ಅಣ್ಣ ಚಿಕ್ಕಜಾಜೂರಿಗೆ ಆಗಮಿಸಿದ್ದು, ಹೊಯ್ಸಳ-04 ವಾಹನದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಕ್ಷಪಡೆಯ ಪೊಲೀಸರು ಆದಿತ್ಯನನ್ನು ಆತನ ಅಣ್ಣನ ವಶಕ್ಕೆ ಅತ್ಯಂತ ಸುರಕ್ಷಿತವಾಗಿ ಒಪ್ಪಿಸಿದ್ದಾರೆ.

ಸಂಕಷ್ಟದಲ್ಲಿದ್ದ ಯುವಕನನ್ನು ಸಕಾಲದಲ್ಲಿ ರಕ್ಷಿಸಿ, ಆತನ ಕುಟುಂಬವನ್ನು ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸರ ಈ ಶ್ಲಾಘನೀಯ ಕಾರ್ಯವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು, ಐ.ಪಿ.ಎಸ್. ಅವರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಸಾರ್ವಜನಿಕರು ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣವೇ 112 ಸಂಖ್ಯೆಗೆ ಕರೆ ಮಾಡುವಂತೆ ಈ ಮೂಲಕ ಮತ್ತೊಮ್ಮೆ ಜಾಗೃತಿ ಮೂಡಿಸಲಾಗಿದೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp