ದಾವಣಗೆರೆ: ಜಿಲ್ಲೆಯ ಉಪಚುನಾವಣಾ ಕಣದಲ್ಲಿ ಇಂದು ಬಿರುಸಿನ ಮತದಾನ ನಡೆಯುತ್ತಿದ್ದು, ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ದಾವಣಗೆರೆಯ ಮತಗಟ್ಟೆಗೆ ಆಗಮಿಸಿದ ಅವರು, ಸರತಿ ಸಾಲಿನಲ್ಲಿ ನಿಂತು ವೋಟ್ ಹಾಕಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿ ಚುನಾವಣಾ ಕಣದ ಬಿಸಿ ಹಾಗೂ ಗೆಲುವಿನ ಲೆಕ್ಕಾಚಾರಗಳ ಬಗ್ಗೆ ಸ್ಫೋಟಕವಾಗಿ ಮಾತನಾಡಿದರು.
ಹಣದ ಬಲದ ಬಗ್ಗೆ ರವೀಂದ್ರನಾಥ್ ಮಾರ್ಮಿಕ ನುಡಿ
ಚುನಾವಣೆಯಲ್ಲಿ ಈ ಬಾರಿ ಹಣದ ಪ್ರಭಾವ ಹೆಚ್ಚಾಗಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕಾಂಚಾಣ ಹಾರಾಡುತ್ತಿದೆ ಎಂಬ ಚರ್ಚೆಗಳು ಮೊದಲಿನಿಂದಲೂ ಇವೆ. ಆದರೆ, ಹಣದ ಬಲದ ಮೇಲೆ ಎಲ್ಲವನ್ನೂ ಗೆಲ್ಲಲು ಸಾಧ್ಯವಿಲ್ಲ. ಸಾಮಾನ್ಯ ಮತದಾರ ತನ್ನದೇ ಆದ ನಿರ್ಧಾರ ಹೊಂದಿರುತ್ತಾನೆ. ನನಗೆ ಯಾರೂ ಹಣ ಕೊಟ್ಟಿಲ್ಲ, ಯಾರಿಗೆ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ಆದರೆ ಜನರ ವಿಶ್ವಾಸ ಗಳಿಸುವುದು ಮುಖ್ಯ,” ಎಂದು ನೇರ ನುಡಿಗಳನ್ನಾಡಿದರು.
ದಾವಣಗೆರೆ ದಕ್ಷಿಣದಲ್ಲಿ ಸಮಬಲದ ಹೋರಾಟ
ಕ್ಷೇತ್ರದ ಇತಿಹಾಸವನ್ನು ನೆನಪಿಸಿಕೊಂಡ ರವೀಂದ್ರನಾಥ್, “ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 1983ರಿಂದಲೂ ಪೈಪೋಟಿ ಇದ್ದೇ ಇದೆ. ಇಲ್ಲಿ ಯಾವತ್ತೂ ಒಬ್ಬರದ್ದೇ ಏಕಪಕ್ಷೀಯ ಆಟ ನಡೆದಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ 50-50 ಪೈಪೋಟಿ ಇರುತ್ತದೆ. ಈ ಬಾರಿಯೂ ಅಷ್ಟೇ ಜಿದ್ದಾಜಿದ್ದಿ ಇದೆ. ಅಲ್ಪಸಂಖ್ಯಾತ ಏರಿಯಾಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಬಹುದು, ನಮ್ಮ ಏರಿಯಾಗಳಲ್ಲಿ ನಾವು ಸಾಧಿಸುತ್ತೇವೆ. ಅಂತಿಮವಾಗಿ 50 ವೋಟು ಅತ್ತ ಅಥವಾ ಇತ್ತ ಆಗಬಹುದು ಅಷ್ಟೇ,” ಎಂದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಹೊಸ ಮುಖಗಳಿಗೆ ಜನರ ಒಲವು?
ಈ ಬಾರಿ ಉಭಯ ಪಕ್ಷಗಳು ಹೊಸ ಮುಖಗಳನ್ನು ಕಣಕ್ಕಿಳಿಸಿರುವ ಬಗ್ಗೆ ಮಾತನಾಡಿದ ಅವರು, “ಚುನಾವಣೆಯಲ್ಲಿ ಹೊಸ ಮುಖಗಳು ಬಂದಾಗ ಮತದಾರರಿಗೆ ಕುತೂಹಲವಿರುತ್ತದೆ. ಯಾರು ಸದಾ ಜನರ ಮಧ್ಯೆ ಇರುತ್ತಾರೋ ಅವರಿಗೆ ಮತದಾರರು ಆಶೀರ್ವಾದ ಮಾಡುತ್ತಾರೆ. ದಾವಣಗೆರೆ ಉತ್ತರ ಮತ್ತು ದಕ್ಷಿಣ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ತಮ್ಮದೇ ಆದ ಪ್ರಯತ್ನ ಮಾಡಿದ್ದಾರೆ,” ಎಂದು ಅಭಿಪ್ರಾಯಪಟ್ಟರು.
ಮೇ 4 ರಂದು ಭವಿಷ್ಯ ನಿರ್ಧಾರ
“ರಾಜ್ಯಾಧ್ಯಕ್ಷರು ಎರಡು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ಓಡಾಡಿದ್ದಾರೆ. ಕಾಂಗ್ರೆಸ್ನವರು ತಮ್ಮ ಗ್ಯಾರಂಟಿ ನಂಬಿ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಆದರೆ ಮತದಾರನ ಮನಸ್ಸಿನಲ್ಲಿ ಏನಿದೆ ಎಂಬುದು ಯಾರಿಗೂ ತಿಳಿಯದು. ಎಲ್ಲದಕ್ಕೂ ಉತ್ತರ ಮೇ 4 ರಂದು ಸಿಗಲಿದೆ,” ಎನ್ನುವ ಮೂಲಕ ಫಲಿತಾಂಶದ ಕುತೂಹಲವನ್ನು ಹಾಗೆಯೇ ಉಳಿಸಿದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
