ಭದ್ರಾವತಿ: ರಾಜಕೀಯ ಅಖಾಡದಲ್ಲಿ ಹಾವು-ಮುಂಗುಸಿಯಂತೆ ಕಚ್ಚಾಡುವ ದಾವಣಗೆರೆಯ ಧ್ರುವತಾರೆಗಳು ಒಂದೇ ವೇದಿಕೆಯಲ್ಲಿ ಸಿಕ್ಕರೆ ಏನಾಗಬಹುದು? ಭದ್ರಾವತಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ವೇದಿಕೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಹಾಗೂ ಶಾಸಕ ಬಿ.ಪಿ. ಹರೀಶ್ ಅವರನ್ನು ಅಕ್ಕಪಕ್ಕ ಕೂರಿಸಿದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ರಾಜಕೀಯ ವೈಷಮ್ಯ ಮರೆಸಲು “ಮದುವೆ”ಯ ಮದ್ದು ಸೂಚಿಸಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.
ಕುಟುಂಬಗಳ ನಡುವೆ ಬೀಗತನ ಬೆಳೆಯಲಿ
ಸಿದ್ದೇಶ್ವರ್ ಮತ್ತು ಮಲ್ಲಿಕಾರ್ಜುನ್ ಅವರನ್ನು ಉತ್ತರ ಹಾಗೂ ದಕ್ಷಿಣ ಧ್ರುವಗಳಿಗೆ ಹೋಲಿಸಿದ ಶ್ರೀಗಳು, “ಇವರಿಬ್ಬರ ಜಗಳ ನೋಡಿ ನಮಗೂ ಸಾಕಾಗಿದೆ. ಇವರು ಸಂಬಂಧದಲ್ಲಿ ಮಾವ-ಅಳಿಯಂದಿರಾಗಬೇಕು. ಮಹಾಭಾರತದಲ್ಲಿ ಪಾಂಡವರು-ಕೌರವರು ಸಂಬಂಧಿಕರಾಗಿದ್ದರೂ ಹೇಗೆ ಹೊಡೆದಾಡಿದರೋ, ಇವರ ಕಥೆಯೂ ಹಾಗೆಯೇ ಆಗಿದೆ. ಅದಕ್ಕೆ ನಾವೊಂದು ಉಪಾಯ ಮಾಡಿದ್ದೇವೆ. ಇವರ ಎರಡೂ ಮನೆತನದ ಮಕ್ಕಳ ನಡುವೆ ಮದುವೆ ಮಾಡಿಸಿ, ಬೀಗತನ ಬೆಳೆಸಿಬಿಟ್ಟರೆ ಈ ಜಗಳ ನಿಲ್ಲಬಹುದು,” ಎಂದು ಹಾಸ್ಯ ಚಟಾಕಿ ಹಾರಿಸಿದರು. ಶ್ರೀಗಳ ಈ ಮಾತಿಗೆ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ನೆರೆದಿದ್ದ ಭಕ್ತಸಾಗರ ಚಪ್ಪಾಳೆ ತಟ್ಟಿ ಸಂಭ್ರಮಿಸಿತು.
ಹಾವು-ಮುಂಗುಸಿ ಕದನ ಬೇಡ
ರಾಜಕೀಯ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ ಶ್ರೀಗಳು, “ನೀವು ವಿಧಾನಸಭೆಯ ಒಳಗೆ ಬೇಕಿದ್ದರೆ ಜಗಳ ಮಾಡಿ, ಆದರೆ ಹೊರಗೆ ಬಂದಾಗ ಅಣ್ಣ-ತಮ್ಮಂದಿರಂತೆ ಇರಬೇಕು. ಸಿದ್ದೇಶ್ವರ್, ಮಲ್ಲಿಕಾರ್ಜುನ್ ಹಾಗೂ ಹರೀಶ್ ಹಾವು-ಮುಂಗುಸಿಯಂತೆ ವರ್ತಿಸುವುದು ಬೇಡ. ಭಿನ್ನಾಭಿಪ್ರಾಯಗಳಿದ್ದರೆ ಖಾಸಗಿಯಾಗಿ ಕುಳಿತು ಬಗೆಹರಿಸಿಕೊಳ್ಳಿ, ಅ ಅದನ್ನು ಬಿಟ್ಟು ಸಾರ್ವಜನಿಕವಾಗಿ ತೇಜೋವಧೆ ಮಾಡಬೇಡಿ,” ಎಂದು ಬುದ್ಧಿವಾದ ಹೇಳಿದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ವಾಟ್ಸಾಪ್ಗೂ ಬೇಕಿದೆ ‘ಸೆನ್ಸಾರ್’
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ವೈಯಕ್ತಿಕ ನಿಂದನೆಗಳ ಬಗ್ಗೆ ಶ್ರೀಗಳು ತೀವ್ರ ಬೇಸರ ವ್ಯಕ್ತಪಡಿಸಿದರು. “ಪ್ರಭಾ ಮಲ್ಲಿಕಾರ್ಜುನ್ ಅವರು ವಾಟ್ಸಾಪ್ನಲ್ಲಿ ಹರಿದಾಡುತ್ತಿರುವ ಕೆಲವು ಕೆಟ್ಟ ಸಂದೇಶಗಳನ್ನು ನನಗೆ ತೋರಿಸಿದರು. ಪತ್ರಿಕೆಗಳಿಗೆ ಇರುವಂತೆ ಎಲೆಕ್ಟ್ರಾನಿಕ್ ಮೀಡಿಯಾ ಹಾಗೂ ವಾಟ್ಸಾಪ್ಗಳಿಗೂ ‘ನೀತಿ ಸಂಹಿತೆ’ ಜಾರಿಯಾಗಬೇಕು. ಈ ಬಗ್ಗೆ ಸಚಿವ ಎಚ್.ಕೆ. ಪಾಟೀಲ್ ಜೊತೆಗೂ ಚರ್ಚಿಸಿದ್ದೇನೆ. ಕಾಂಗ್ರೆಸ್ ಸರ್ಕಾರ ಇಂತಹದೊಂದು ಕಟ್ಟುನಿಟ್ಟಿನ ಬಿಲ್ ತಂದರೆ, ವಿರೋಧ ಪಕ್ಷದವರಾದ ನೀವು (ಬಿ.ಪಿ. ಹರೀಶ್) ಅದನ್ನು ವಿರೋಧಿಸದೆ ಬೆಂಬಲಿಸಬೇಕು,” ಎಂದು ಹರೀಶ್ ಅವರಿಗೆ ವೇದಿಕೆಯಲ್ಲೇ ಸೂಚನೆ ನೀಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಮೂವರು ನಾಯಕರು ಒಟ್ಟಾಗಿ ಶ್ರೀಗಳಿಗೆ ನಮಸ್ಕರಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದು, “ಭದ್ರಾವತಿ ತರಳಬಾಳು ಹುಣ್ಣಿಮೆ ನಿಜವಾಗಿಯೂ ಯಶಸ್ವಿಯಾಯಿತು,” ಎಂದು ಶ್ರೀಗಳು ಘೋಷಿಸಿದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
